ಬೆಂಗಳೂರು; ವೈವಾಹಿಕ ಸಮಸ್ಯೆಗಳಂತಹ ಖಾಸಗಿ ವಿಷಯಗಳನ್ನು ವರದಿ ಮಾಡುವಾಗ ಮಾಧ್ಯಮಗಳು ಲಕ್ಷ್ಮಣ ರೇಖೆಯನ್ನು ದಾಟಬಾರದು ಎಂದು ಹೈಕೋರ್ಟ್ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದೆ.
ಅರ್ಜಿದಾರನ ವೈವಾಹಿಕ ವಿವಾದ ಕುರಿತು ಕಾರ್ಯಕ್ರಮವನ್ನು ಪ್ರಸಾರ ಮಾಡುವುದಕ್ಕೆ ಖಾಸಗಿ ಸುದ್ದಿವಾಹಿನಿಗೆ ತಡೆ ನೀಡಿದ ನ್ಯಾಯಮೂರ್ತಿ ಬಿ ವೀರಪ್ಪ ಅವರ ನೇತೃತ್ವದ ನ್ಯಾಯಪೀಠ, ಸಮಾಜದಲ್ಲಿನ ಭ್ರಷ್ಟಾಚಾರ, ಪಕ್ಷಪಾತೀಯ ನಿಲುವು, ಕಾನೂನು ಪಾಲಿಸದಿರುವುದು, ನಿಂದನೆ, ಹಲ್ಲೆ, ಅಧಿಕಾರ ದುರುಪಯೋಗ, ಕಾನೂನು-ಸುವ್ಯವಸ್ಥೆ, ಆರ್ಥಿಕತೆ, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳನ್ನು ವರದಿ ಮಾಡುವುದರ ಕಡೆಗೆ ಇರಬೇಕು, ಇವೆಲ್ಲ ಸಾರ್ವಜನಿಕರಿಗೆ ಉಪಯೋಗವಾಗುವಂತವುಗಳು ಎಂದು ಹೇಳಿದೆ.
ಪತ್ರಿಕಾ ಸ್ವಾತಂತ್ರ್ಯದ ಮೇಲೆ ಕಾರಣಬದ್ಧ ಅಡೆತಡೆ ಹೇರುವುದರ ಉದ್ದೇಶವನ್ನು ವಿವರಿಸಿದ ನ್ಯಾಯಮೂರ್ತಿಗಳು, ಮಾಹಿತಿ ಹಕ್ಕು ಕಾಯ್ದೆ ಮೂಲಭೂತ ಹಕ್ಕು ಮತ್ತು ಪತ್ರಿಕಾ ಸ್ವಾತಂತ್ರ್ಯದ ಹಕ್ಕು ಸಾರ್ವಜನಿಕ ಹಿತಾಸಕ್ತಿಗೆ ತಕ್ಕವಾಗಿ ಇರಬೇಕು. ವ್ಯಕ್ತಿಯ ಖಾಸಗಿತನವನ್ನು ಕಸಿದುಕೊಳ್ಳಬಾರದು ಎಂದು ನ್ಯಾಯಾಲಯ ಹೇಳಿದೆ.