ಧಾರವಾಡ: ಧಾರವಾಡ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಟ್ಟಡದ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಧಾರವಾಡ ಬಹುಮಹಡಿ ಕಟ್ಟಡ ಕುಸಿತ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಕಟ್ಟಡ ಮಾಲೀಕರು ಹಾಗೂ ಇಂಜಿನಿಯರ್ ವಿರುದ್ಧ ಪ್ರಕರಣ ದಾಖಲಾಗಿದೆ. ಪಾಲಿಕೆ ಸಹಾಯಕ ಆಯುಕ್ತ ಸಂತೋಷ ಆನಿಶೆಟ್ಟರ್ ಅವರು ಪೊಲೀಸರಿಗೆ ದೂರ ಸಲ್ಲಿಸಿದ್ದು, ಕಟ್ಟಡ ನಿರ್ಮಾಣದ ಹೊಣೆ ಹೊತ್ತಿದ್ದ ರೇಣುಕಾ ಕನ್ಸ್ ಟ್ರಕ್ಷನ್ ಮಾಲೀಕ ವಿವೇಕ ಪವಾರ್, ಕಟ್ಟಡ ಮಾಲೀಕರಾದ ಬಸವರಾಜ್ ನಿಗದಿ, ರವಿ ಸವರದ, ಗಂಗಪ್ಪ ಶಿಂತ್ರಿ, ಮಹಾಬಲೇಶ್ವರ ಕುರಬಗುಡಿ, ರಾಜು ಘಾಟಿನ್ ವಿರುದ್ಧ ಕ್ರಿಮಿನಲ್ ಕೇಸನ್ನು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಮಾಧ್ಯಮವೊಂದರ ವರದಿಯ ಅನ್ವಯ ಈವರೆಗೂ 53 ಜನರನ್ನು ರಕ್ಷಣೆ ಮಾಡಿ ಅವರನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. 43 ಮಂದಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, 13 ಮಂದಿಯನ್ನು ಎಸ್ ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಧಾರವಾಡ ಜಿಲ್ಲಾಸ್ಪತ್ರೆ ವೈದ್ಯ ಗಿರಿಧರ್ ಕುಕನೂರ್ ಹೇಳಿದ್ದಾರೆ.
ಕಟ್ಟಡದ ಕೆಳಗೆ 12 ಜನ ಮಕ್ಕಳು ಸಿಲುಕಿರುವ ಬಗ್ಗೆ ಮಾಹಿತಿ ಇದೆ. ಸದ್ಯಕ್ಕೆ ಅವರನ್ನು ಹೊರತರುವ ಕೆಲಸ ಭರದಿಂದ ಸಾಗಿದೆ. ಕಟ್ಟಡದ ಕೆಳಗಡೆ ಸಿಲುಕಿರುವ ಜನರಿಂದ ಕೂಗು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎನ್ಡಿಆರ್ಎಫ್ ಹಾಗೂ ಎನ್ಎಸ್ಎಫ್ ತಂಡಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. ಮುಖ್ಯವಾಗಿ ಜೀವ ಉಳಿಸುವುದಕ್ಕೆ ಮೊದಲ ಅದ್ಯತೆ ನೀಡಲಾಗುತ್ತಿದ್ದು, ಕಟ್ಟಡ ಕೊರೆದು ಮಕ್ಕಳ ರಕ್ಷಣೆ ಮಾಡಲಾಗುತ್ತಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದುರಂತಕ್ಕೆ ಕಾರಣರಾದವರ ಮೇಲೆ ಪ್ರಕರಣ ಕೂಡ ದಾಖಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ.
ಅಶೀತ್ ಹಿರೇಮಠ ಎಂಬವರು ಕಟ್ಟಡದಲ್ಲಿ ಮೂರು ತಿಂಗಳಿನಿಂದ ಪೇಂಟ್ ಅಂಗಡಿ ಇಟ್ಟುಕೊಂಡಿದ್ದರು. ಕಟ್ಟಡದ ಕುಸಿತದ ವೇಳೆ ಅಶೀತ್ ಅಂಗಡಿಯಲ್ಲಿದ್ದರು. ಇತ್ತ ಪತಿ ಕಾಣದೆ ಅವರ ಗರ್ಭಿಣಿ ಪತ್ನಿ ಕಂಗಲಾಗಿದ್ದು, ಆಸ್ಪತ್ರೆ ಆವರಣದಲ್ಲಿ ಅಶೀತ್ ಗಾಗಿ ಕುಟುಂಬ ಕಾದು ಕುಳಿತಿತ್ತು. ಕೊನೆಗೂ ಸತತ 14 ಘಂಟೆಗಳ ಕಾರ್ಯಾಚರಣೆ ಬಳಿಕ ಅಶೀತ್ ಬದುಕಿ ಬಂದಿದ್ದಾರೆ.