ರಾಜ್ಯ

ನಸುಕಿನ ಜವರಾಯನ ಅಟ್ಟಹಾಸ: ವಿಜಯಪುರದಲ್ಲಿ ಕ್ರೂಸರ್- ಟ್ಯಾಂಕರ್ ಡಿಕ್ಕಿ, 9 ಮಂದಿ ದುರ್ಮರಣ

Shilpa D
ವಿಜಯಪುರ:  ಕ್ರೂಸರ್-ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 9 ಮಂದಿ ಸಾವನ್ನಪ್ಪಿರುವ ಘಟನೆ ವಿಜಯಾಪುರ ಜಿಲ್ಲೆಯ ಚಿಕ್ಕಸಿಂಧಗಿಯಲ್ಲಿ ನಡೆದಿದೆ. 
ನಸುಕಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ಸಿಂದಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಮೃತಪಟ್ಟವರೆಲ್ಲರೂ ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದವರು ಎನ್ನಲಾಗಿದೆ. 
ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತರೆಲ್ಲರೂ ಯುವಕರಾಗಿದ್ದು, ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುವವರಾಗಿದ್ದಾರೆ. ಕಾರ್ಮಿಕರು ಮತ್ತು ಅವರ ಸ್ನೇಹಿತರು ಗೋವಾ ಪ್ರವಾಸಕ್ಕೆ ತೆರಳಿದ್ದರು. ಹೋಳಿ ಹಬ್ಬ ಆಚರಿಸಿ ಪಟ್ಟಣಕ್ಕೆ ಮರಳುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಸಾಗರ್ (25), ಚಾಂದ್‌ಬಾಷಾ (24), ಅಜಿಮ್ (26) ಅಂಬರೀಶ್ (28), ಕೆ.ಕೆ. ಶಾಕೀರ್ (25), ಶ್ರೀನಾಥ (30), ಯೂನುಸ್, ಗುರು (32) ಮತ್ತು ಮಗಸಾಬ (29) ಮೃತ ದುರ್ದೈವಿಗಳು. 
ಟ್ಯಾಂಕರ್ ಚಾಲಕ ಸಾಜಿದ್ ಇಸ್ಮಾಯಿಲ್, ಆಕಾಶ್ ದೊರೆ, ಮಲ್ಲಿಕಾರ್ಜುನ, ಮಂಜು, ಸದ್ದಾಂ ಮತ್ತು ಆನಂದ್ ಸೊಪೇಟಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕ್ಯಾಂಟರ್ ಚಾಲಕ ಸೇರಿದಂತೆ ಮೂವರ ಸ್ಥಿತಿ ಚಿಂತಾಜನಕವಾಗಿದೆ.
SCROLL FOR NEXT