ಬೆಂಗಳೂರು: ಕನ್ನಡಪ್ರಭ.ಕಾಂ ನ ಹಣಕ್ಲಾಸು ಅಂಕಣಕಾರ, ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರ ಸ್ಪ್ಯಾನಿಷ್ ಗಾದೆಗಳು ಪುಸ್ತಕ ಮೇ.05 ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಂಡಿತು.
ಹೊಸ ತಿಪ್ಪಸಂದ್ರ ಮುಖ್ಯರಸ್ತೆಯಲ್ಲಿರುವ ಎಂ.ಡಿಪಿ ಕಾಫಿ ಹೌಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಿರುವ ಪುಸ್ತಕ, ರಿಡೂ ಕನ್ನಡ ವೆಬ್ ಪೋರ್ಟಲ್ ನಲ್ಲಿ ಪ್ರಕಟವಾಗುತ್ತಿದ್ದ ಸ್ಪ್ಯಾನಿಷ್ ಗಾದೆಗಳು ಅಂಕಣದ ಸಂಗ್ರಹವಾಗಿದೆ.
ರೀಡೂ ಕನ್ನಡ ಸಂಪಾದಕ ಶಿವಪ್ರಸಾದ್ ಭಟ್, ವಿಜ್ಞಾನ-ಗಣಿತ ಲೇಖಕ, ಅಂಕಣಕಾರ ರೋಹಿತ್ ಚಕ್ರತೀರ್ಥ, ಭೂವಿಜ್ಞಾನಿ, ಸಂಶೋಧಕ, ತಾಳಗುಂದ ಅನಂತರಾಮು, ವಿಕ್ರಮ ಮಾಸ ಪತ್ರಿಕೆಯ ಸಂಪಾದಕ, ಪುಸ್ತಕವನ್ನು ಪ್ರಕಟಿಸಿರುವ ಸಂವೃದ್ಧ ಸಾಹಿತ್ಯ ಪ್ರಕಾಶಕರಾದ ಹರ್ಷ, ಉದ್ಯಮಿಗಳಾದ ಪವನ್ ಚಂದ್ ನಹರ್, ಮುಖೇಶ್ ಬೊರ ಪುಸ್ತಕ ಲೋಕಾರ್ಪಣೆ ಮಾಡಿದರು.
ಈ ಕೃತಿ ಸ್ಪೇನ್ ದೇಶವನ್ನು, ಅಲ್ಲಿನ ಭಾಷೆಯನ್ನು, ಗಾದೆಗಳ ಮೂಲಕ ಜನಪದ ಬದುಕನ್ನು ಅರಿಯುವ ಯತ್ನವಾಗಿದೆ. ಕಳೆದ ಎರಡು ದಶಕದಿಂದ ಆಂತರಿಕ ಲೆಕ್ಕ ಪರಿಶೋಧಕರಾಗಿ ದುಬೈ ಮತ್ತು ಯೂರೋಪಿನ ವಿತ್ತ ಪ್ರಪಂಚದಲ್ಲಿ ಕಾರ್ಯನಿರ್ವಹಿಸಿರುವ ರಂಗಸ್ವಾಮಿ ಮೂಕನಹಳ್ಳಿಯವರು ಹಣಕ್ಲಾಸು ಅಂಕಣದ ಜೊತೆಗೆ ಸ್ಪ್ಯಾನಿಷ್ ಗಾದೆಗಳು ಹಾಗೂ ಲೋಕವಿಹಾರಿ-ಸಸ್ಯಾಹಾರಿ ಎಂಬ ಅಂಕಣಗಳನ್ನೂ ಬರೆಯುತ್ತಿದ್ದಾರೆ.