ಬೆಂಗಳೂರು: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಕಾಣಿಸಿಕೊಂಡು ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಕೊನೆಗೂ ಪತ್ತೆ ಹಚ್ಚಿದ್ದು, ರಾಜಸ್ಥಾನ ಮೂಲದ ಸಾಜಿದ್ ಖಾನ್ ನನ್ನು ವಶಕ್ಕೆ ಪಡೆದಿರುವುದಾಗಿ ಶನಿವಾರ ಪೊಲೀಸರು ತಿಳಿಸಿದ್ದಾರೆ.
38 ವರ್ಷದ ಸಾಜಿದ್ ಖಾನ್ ನನ್ನು ಆರ್ ಟಿ ನಗರದಲ್ಲಿ ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಸೋಮವಾರ ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿಯೊಬ್ಬ ಪತ್ತೆಯಾಗಿದ್ದ. ಶಂಕಿತ ವ್ಯಕ್ತಿಯ ಪತ್ತೆಗಾಗಿ ಸಿಲಿಕಾನ್ ಸಿಟಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು.
ಸಾಜಿದ್ ಖಾನ್ ಮೆಟ್ರೋ ನಿಲ್ದಾಣದ ಮೆಟಲ್ ಡಿಟೆಕ್ಟರ್ ಬಳಿ ಬಂದಾಗ ಬೀಪ್ ಸೌಂಡ್ ಬಂದಿದೆ. ಇದರಿಂದ ಆತಂಕಗೊಂಡ ಸಾಜಿದ್ ಖಾನ್ ವಾಪಸ್ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ವಶದಲ್ಲಿರುವ ಸಾಜಿದ್ ಖಾನ್ ರಂಜಾನ್ ಹಿನ್ನೆಲೆಯಲ್ಲಿ ದಾನ(ಝಕಾತ್ ) ಸ್ವೀಕರಿಸಲು ಬಂದಿದ್ದಾಗಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಭಿಕ್ಷಾಟನೆಗಾಗಿ ಮಡದಿ ಹಾಗೂ ಮಕ್ಕಳ ಸಮೇತ ಬಂದಿದ್ದು, ಪ್ರತಿವರ್ಷವೂ ರಂಜಾನ್ ವೇಳೆಗೆ ಬೆಂಗಳೂರಿಗೆ ಬಂದು ಭಿಕ್ಷಾಟನೆ ಮಾಡುವುದಾಗಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.