ಬೆಂಗಳೂರು: ಸರ್ಕಾರಿ ನೌಕರರು ಮಾನ್ಯತೆ ಹೊಂದಿರದ ರಾಜ್ಯದ ಹಾಗೂ ಹೊರ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲು ಸರ್ಕಾರದ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಯವರಿಗೆ ಅಧಿಕಾರ ನೀಡಿರುವ ಅರ್ಹತಾ ಮೊತ್ತದ ಮಿತಿಯನ್ನು 2 ಲಕ್ಷ ರೂಗಳಿಂದ 3 ಲಕ್ಷ ರೂಗೆ ಹೆಚ್ಚಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪ್ರಸ್ತುತ ವೈದ್ಯಕೀಯ ಚಿಕಿತ್ಸಾ ವೆಚ್ಚ ದುಬಾರಿಯಾಗಿದೆ. ಮಾನ್ಯತೆ ಪಡೆಯದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಅರ್ಹತಾ ಮೊತ್ತ 2 ಲಕ್ಷ ರೂ.ಗಳನ್ನು ಮೀರಿದ ಮರುಪಾವತಿ ಪ್ರಕರಣಗಳು ನಿಯಮ ಸಡಿಲಿಕೆಗಾಗಿ, ಆಡಳಿತ ಇಲಾಖೆಗಳ ಮೂಲಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಬರುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇದರಿಂದ ವೈದ್ಯಕೀಯ ವೆಚ್ಚದ ಮರುಪಾವತಿಯು ವಿಳಂಬವಾಗಿ ಸರ್ಕಾರಿ ನೌಕರರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳಿಗೆ ನೀಡಿರುವ 2 ಲಕ್ಷ ರೂ.ಗಳವರೆಗಿನ ಅಧಿಕಾರ ಮಿತಿಯನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಆದೇಶ ಹೊರಡಿಸಿದ ದಿನಾಂಕದ ನಂತರ ಚಿಕಿತ್ಸೆ ಪಡೆದಿರುವ ಪ್ರಕರಣಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಅರ್ಹತಾ ಮೊತ್ತ 3 ಲಕ್ಷ ರೂ.ಗಳನ್ನು ಮೀರಿದ ಹಾಗೂ 5 ಲಕ್ಷ ರೂ.ವರೆಗಿನ ಮರುಪಾವತಿ ಪ್ರಕರಣಗಳನ್ನು ಇಲಾಖಾ ಮುಖ್ಯಸ್ಥರು, ತಮ್ಮ ನಿರ್ದಿಷ್ಟ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆಗಳನ್ನು ನೇರವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸಲ್ಲಿಸದೆ ಸಂಬಂಧಪಟ್ಟ ಸಚಿವಾಲಯದ ಇಲಾಖಾ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳ ಮೂಲಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗಳ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ ಅವರಿಗೆ ಸಲ್ಲಿಸಬೇಕು. ನಂತರ ಆಡಳಿತ ಇಲಾಖೆ ಈ ಪ್ರಸ್ತಾವನೆಗಳನ್ನು ಯಾಂತ್ರಿಕವಾಗಿ ಪರಿಗಣಿಸದೇ ಅಪವಾದಾತ್ಮಕವಾದ ಸಂದರ್ಭವೆಂದು ದೃಢಪಟ್ಟಲ್ಲಿ ಮಾತ್ರ ನಿರ್ದಿಷ್ಟ ಶಿಫಾರಸುಗಳೊಂದಿಗೆ ಪ್ರಸ್ತಾವನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕಳುಹಿಸಬೇಕು. ಇದೇ ರೀತಿ 5 ಲಕ್ಷ ರೂ.ಮೀರಿದ ಹಾಗೂ ಇನ್ನಿತರ ನಿಯಮಗಳ ಸಡಿಲಿಕೆ ಪ್ರಕರಣಗಳನ್ನು ಪರಿಶೀಲಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಮೂಲಕ ಮುಖ್ಯಮಂತ್ರಿ ಅವರ ಆದೇಶಕ್ಕಾಗಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos