ಬೆಳಗಾವಿ: ಗಂಡನ ಕೀರುಕುಳಕ್ಕೆ ಬೇಸತ್ತ ತಾಯಿಯೊಬ್ಬಳು ಮಗನೊಂದಿಗೆ ರೈಲ್ವೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಪಟ್ಟಣದ ಗಾಂಧಿ ನಗರದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಾರಗುಪ್ಪಿ ಮೂಲದ ರೇಣುಕಾ (35) ಮತ್ತು ಮಗ ಲಕ್ಷ್ಮಣ (7) ಮೃತಪಟ್ಟ ನತದೃಷ್ಟರೆಂದು ತಿಳಿದು ಬಂದಿದೆ.
ಕಾರಗುಪ್ಪಿ ಗ್ರಾಮ ಮೂಲದ ಇವರು ಸ್ಥಳೀಯ ನ್ಯೂ ಗಾಂಧಿ ನಗರದ ಶೆಡ್ವೊಂದರಲ್ಲಿ ಮೂರು ಮಕ್ಕಳೊಂದಿಗೆ ವಾಸವಾಗಿದ್ದರು, ಹೊಟ್ಟೆಪಾಡಿಗೆ ತರಕಾರಿ ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದೆ.
ಗಂಡ ಯಲ್ಲಪ್ಪ ಹೆಂಡತಿ ರೇಣುಕಾಗೆ ನಿತ್ಯ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಮಂಗಳವಾರ ರಾತ್ರಿ ಮನೆಗೆ ಬಂದ ಯಲ್ಲಪ್ಪ ಹೆಂಡತಿ ರೇಣುಕಾನೊಂದಿಗೆ ಜಗಳವಾಡಿ ಹಲ್ಲೆ ನಡೆಸಿದ್ದಾನೆ. ಗಂಡನ ನಿತ್ಯದ ಕಿರುಕುಳಕ್ಕೆ ಬೇಸತ್ತು ತನ್ನ ಎರಡು ಮಕ್ಕಳೊಂದಿಗೆ ಪಕ್ಕದ ರೈಲ್ವೆ ಟ್ರ್ಯಾಕ್ಗೆ ತೆರಳಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಈ ದುರಂತದಲ್ಲಿ ತಾಯಿ ಮತ್ತು ಮಗ ಮೃತಪಟ್ಟಿದ್ದು, 12 ವರ್ಷದ ಮಗಳು ಸವಿತಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಮಾಲಮಾರುತಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತ ದೇಹಗಳು ಛೀದ್ರವಾಗಿ ಬಿದ್ದಿದ್ದು, ಅವುಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ರೇಣುಕಾ ಮತ್ತು ಲಕ್ಷ್ಮೀಣ ಸಾವಿಗೆ ಯಲ್ಲಪ್ಪನೇ ಕಾರಣವಾಗಿದ್ದು, ಕೂಡಲೇ ಆತನನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಮೃತ ರೇಣುಕಾಳ ಸಂಬಂಧಿಕರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಯಲ್ಲಪ್ಪನ ಶೋಧನಾ ಕಾರ್ಯ ಚುರುಕುಗೊಳಿಸಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ, ಪತ್ನಿ ಹಾಗೂ ಮಗನನ್ನು ಪತಿಯೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.