ರಾಜ್ಯ

ಬರಿದಾಗುತ್ತಿದೆ ಮಲಪ್ರಭಾ ಒಡಲು: ರಾಜ್ಯಕ್ಕೆ ಕಾದಿದೆಯೇ ಭಾರಿ ಜಲಕ್ಷಾಮ?

Shilpa D
ಬೆಳಗಾವಿ: ಮುಂಗಾರು ಪೂರ್ವ ಮಳೆ ಕೊರತೆಯಿಂದಾಗಿ ರಾಜ್ಯದ ಪ್ರಮುಖ ನದಿಗಳಿಗೆ ನೀರಿನ ಒಳ ಹರಿವು ನಿಂತು ಹೋಗಿ ನಾಡಿನ ಹಲವು ಜಲಾಶಯಗಳ ಒಡಲು ಬರಿದಾಗುತ್ತಿದೆ. ಈ ಮಧ್ಯೆ ಮುಂಗಾರು ಕೂಡ ವಿಳಂಬವಾಗಿ ಪ್ರವೇಶಿಸುತ್ತಿರುವುದರಿಂದ ಮಲಪ್ರಭಾ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದೆ. 
ಮಲಪ್ರಭಾ ಜಲಾಶಯದ ನೀರಿನ ಮಟ್ಟ ಕುಸಿದಿರುವ ಕಾರಣ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ ಮತ್ತು ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ನೀರಿನ ಕ್ಷಾಮ ತಲೆದೋರಲಿದೆ.
ಮಲಪ್ರಭಾ ಜಲಾಶಯದ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ 34 ಟಿಎಂಸಿ ಆದರೆ ಈಗ ಕೇವಲ 1.6ಟಿಎಂಸಿ ನೀರಿದೆ, ಹೀಗಾಗಿ ನಿರನ್ನು ಮಿತವಾಗಿ ಬಳಸಬೇಕೆಂದು ಸಂಬಂಧ ಪಟ್ಟ ಇಲಾಖೆ ನಾಗರಿಕರಿಗೆ ಸೂಚಿಸಿದೆ.
ಮಲಪ್ರಭಾ ಜಲಾಶಯದಿಂದ ಬೈಲಹೊಂಗಲ, ಸವದತ್ತಿ, ರಾಮದುರ್ಗ ಹಾಗೂ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ರೋಣ, ಬಾಗಲಕೋಟೆಯ ಹಲವು ಗ್ರಾಮಗಳಿಗೆ ನೀರು ಪೂರೈಸಲಾಗುತ್ತದೆ. 
ಜಲಾಶಯದ ನೀರನ್ನೇ ನಂಬಿಕೊಂಡಿರುವ ಜನರಿಗೆ ನೀರಿನ ಸಮಸ್ಯೆ ಕಟ್ಟಿಟ್ಟ ಬುತ್ತಿ, ಸವದತ್ತಿ ತಾಲೂಕಿನ ನಿವಲು ತೀರ್ಥ ಗ್ರಾಮದಲ್ಲಿ ಮಲಪ್ರಭ ಜಲಾಶಯವಿದೆ, ಎರಡು ಕಾಲುವೆಗಳಿಂದ 1973 ರಿಂದಲೂ ಸುತ್ತಮುತ್ತಲ ಹಳ್ಳಿಗಳಿಗೆ ನೀರು ಪೂರೈಸಲಾಗುತ್ತಿದೆ.,
ಈ ಎರಡು ಕಾಲುವೆಗಳಿಂದ 1,96,132 ಹೆಕ್ಟೇರ್ ಕೃಷಿಭೂಮಿಗೆ ನೀರು ಒದಗಿಸಲಾಗುತ್ತದೆ.,ನವೆಂಬರ್-ಡಿಸೆಂಬರ್ ಸಮಯದಲ್ಲಿ ಕೃಷಿಗಾಗಿ 14 ಟಿಎಂಸಿ ನರು ಹರಿಸಲಾಗುತ್ತದೆ. ಆದರೆ ಇಂದು ಪರಿಸ್ಥಿತಿ ಹದಗೆಟ್ಟಿರುವ ಕಾರಣ, ಕೇವಲ ಕುಡಿಯವ ನೀರಿಗಾಗಿ ಮಾತ್ರ ಬಳಕೆ ಮಾಡಲಾಗುತ್ತಿದೆ,. ಕೇವಲ ಕುಡಿಯುವ ನೀರಿಗಾಗಿ ಬಳಕೆ ಮಾಡಿದರೇ ಜೂನ್ ತಿಂಗಳ ಅಂತ್ಯದವರೆಗೆ ಸಾಕಾಗುತ್ತದೆ. ಜೂನ್ ಮೊದಲ ವಾರ ಅಥವಾ ಎರಡನೇ ವಾರದಲ್ಲಿ  ಮಳೆಯಾದರೇ ಕುಡಿಯುವ ನೀರಿಗೆ ಸಮಸ್ಯೆಯಾಗುವುದಿಲ್ಲ ಎಂದು ಜಲಾಶಯದ ಎಂಜಿನೀಯರ್ ತಿಳಿಸಿದ್ದಾರೆ.
ಮಲಪ್ರಭಾ ನದಿ ಪಾತ್ರದಲ್ಲಿರುವ ಗ್ರಾಮಸ್ಥರು ಈಗಾಗಲೇ ಬರ ಪರಿಸ್ಥಿತಿ ಎದುರಿಸುತ್ತಿದ್ದಾರೆ,. ಇನ್ನೂ ಹಲವು ಗ್ರಾಮಗಳು ಬರದ ಪಟ್ಟಿಗೆ ಸೇರುವ ಸಾಧ್ಯತೆಯಿದೆ.
SCROLL FOR NEXT