ರಾಜ್ಯ

ಬೆಂಗಳೂರು: ದುಬಾರಿ ಬಡ್ಡಿ ಪಡೆಯುತ್ತಿದ್ದ ಫೈನಾನ್ಸ್ ಗಳ ಮೇಲೆ ದಾಳಿ, 6 ಜನರ ಬಂಧನ

Raghavendra Adiga
ಬೆಂಗಳೂರು: ಹಣವನ್ನು ಸಾಲ ನೀಡಿ ದುಬಾರಿ ಬಡ್ಡಿ ನೀಡಬೇಂಕು ಎಂದು ಒತ್ತಾಯಿಸುತ್ತಿದ್ದ ನಗರದ ಏಳು ಪೈನಾನ್ಸ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಒಟ್ಟು ಆರು ಜನರನ್ನು ಬಂಧಿಸಿದ್ದಾರೆ.
ಲಲಿತ್ ಕಾನೂಗ (52), ಆಶೀಸ್ (28) ಹಾಗೂ ಸಂಜಯ್ ಸಚ್ ದೇವ್ (35) ಚಂದ್ರು (55), ಓಂ ಪ್ರಕಾಶ್ (56) ಹಾಗೂ ಮಾತಾ ಪ್ರಸಾದ್ (34) ಬಂಧಿತ ಆರೋಪಿಗಳು.
ಲೇವಾದೇವಿಗಾರರು ಹಾಗೂ ಅವರ ಏಜೆಂಟ್ ಗಳು ಹಣವನ್ನು ಸಾಲ ನೀಡಿ, ಬಳಿಕ ಶೇ.20ರಿಂದ 25ರಷ್ಟು ದುಬಾರಿ ಬಡ್ಡಿ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆಂದು ಆರೋಪಿಸಿ ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಹಲವರು ದೂರು ದಾಖಲಿಸಿದ್ದರು. 
ನಂತರ ಪೊಲೀಸರು ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ವಹಿಸಿದ್ದರು. ನಿನ್ನೆ ಕಾನೂನು ಬಾಹಿರವಾಗಿ ಹಣದ ವ್ಯವಹಾರ ನಡೆಸುತ್ತಿದ್ದ ಕಲಾಸಿಪಾಳ್ಯದ ಆಶಿಶ್ ಮೆಟಲ್ಸ್, ಶಾರದ ಟಾಕೀಸ್ ಹಿಂಭಾಗದ ರಾಜೀವ್ ಫೈನಾನ್ಸ್ ಹಾಗೂ ಶಾಂತಿನಗರದ ಸಂಜಯ್ ಫೈನಾನ್ಸ್, ಜೆಪಿ ನಗರದ ರಾಜಾಸಾಬ್ ಫೈನಾನ್ಸ್ ಮತ್ತು ಸ್ಕಂದ್ ಎಂಟರ್ ಪ್ರೈಸೆಸ್, ಹನುಮಂತ ನಗರದ ವೈಷ್ಣವಿ ಹೋಲ್ಡಿಂಗ್ ಸೇರಿ ಒಟ್ಟು ಏಳು ಕಚೇರಿಗಳನ್ನು ಶೋಧಿಸಿ, ಆರು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವ್ಯವಹಾರಕ್ಕೆ ಸಂಬಂಧಿಸಿದಂತೆ 566 ಚೆಕ್ ಗಳು, 197 ಆನ್ ಡಿಮ್ಯಾಂಡ್ ನೋಟುಗಳು ಹಾಗೂ 9,03,200 ರೂ. ನಗದು ಮತ್ತು 3 ಸೇಲ್ ಡೀಡ್ ಗಳು, 28 ಅಗ್ರಿಮೆಂಟ್ ಗಳು ಸೇರಿ ಕೃತ್ಯಕ್ಕೆ ಬಳಸಿದ್ದ ಲ್ಯಾಪ್ ಟ್ಯಾಪ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟಿ ಮಾರುಕಟ್ಟೆ, ಪುಟ್ಟೇನಹಳ್ಳಿ ಹಾಗೂ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
SCROLL FOR NEXT