ರಾಜ್ಯ

ನೇಕಾರರಿಗೆ ಆಗುತ್ತಿರುವ ತಾರತಮ್ಯ ಪ್ರತಿಪಕ್ಷ ನಾಯಕರಿಗೆ ಕಾಣಿಸುತ್ತಿಲ್ಲ, ಎಸ್ಸಾರ್ ಕಾಲ ಹರಣ

Srinivasamurthy VN

ಬಾಗಲಕೋಟೆ: ವಿಧಾನಸಭೆಯ ಕೆಳಮನೆ ಮತ್ತು ಮೇಲ್ಮನೆ ಪ್ರತಿಪಕ್ಷ ನಾಯಕರಿಬ್ಬರೂ ಬಾಗಲಕೋಟೆ ಜಿಲ್ಲೆಗೆ ಸೇರಿದವರಾಗಿದ್ದರೂ ಜಿಲ್ಲೆಯ ಪ್ರವಾಹ ಸಂತ್ರಸ್ತ ನೇಕಾರರಿಗೆ ಆಗಿರುವ ಘೋರ ಅನ್ಯಾಯ ಕಾಣಿಸುತ್ತಿಲ್ಲ. 

ಸರ್ಕಾರದ ತಪ್ಪು ನಿಲುವು, ನಿರ್ಧಾರಗಳ ಬಗ್ಗೆ ಸದಾ ಎಚ್ಚರಿಸಬೇಕಾದ ಪ್ರತಿಪಕ್ಷ ನಾಯಕರು ಜಿಲ್ಲೆಯ ಪ್ರವಾಹ ಸಂತ್ರಸ್ತರ ವಿಷಯದಲ್ಲಿ ಎಷ್ಟೇ ಅನ್ಯಾಯವಾಗುತ್ತಿದ್ದರೂ ಮೌನಕ್ಕೆ ಶರಣಾಗಿರುವುದು ಅವರುಗಳ ಮೇಲೆ ಆಕ್ರೋಶ ಭಾವನೆ ಹುಟ್ಟಲು ಕಾರಣರಾಗುತ್ತಿದ್ದಾರೆ.  ಆಗಸ್ಟ್ ತಿಂಗಳಿನಿಂದ ಸುರಿದ ಸತತ ಮಳೆ ಮತ್ತು ಮೂರು ಬಾರಿ ಜಿಲ್ಲೆಯ ನದಿಗಳಲ್ಲಿ ಉಂಟಾದ ಪ್ರವಾಹದಿಂದ ಬದುಕನ್ನೆÃ ಕಳೆದುಕೊಂಡು ಬೀದಿ ಪಾಲಾಗಿರುವವರ ಪೈಕಿ ಇಲ್ಲಿನ ನೇಕಾರರ ಕುಟುಂಬಗಳ ಸಂಖ್ಯೆ ಹೆಚ್ಚಾಗಿದೆ.

ಜಿಲ್ಲೆಯಲ್ಲಿ ಕೃಷಿ ಬಿಟ್ಟರೆ ಅತ್ಯಂತ ದೊಡ್ಡ ಉದ್ಯೋಗ ನೇಕಾರಿಕೆ. ಇಲ್ಲಿ ಲಕ್ಷಕ್ಕೂ ಅಧಿಕ ನೇಕಾರರ ಕುಟುಂಬಗಳಿವೆ. ಇಲ್ಲಿನ ತೇರದಾಳ, ರಬಕವಿ,ಬನಹಟ್ಟಿ, ಹೊಸೂರು, ಮಹಾಲಿಂಗಪುರ, ಕಮತಗಿ,ಗೋವನಕೊಪ್ಪ ಸೇರಿದಂತೆ ಬೆಳಗಾವಿ ಜಿಲ್ಲೆಯ ಅನೇಕ ಪಟ್ಟಣಗಳಲ್ಲಿ ಸತತ ಮಳೆ ಮತ್ತು ಪ್ರವಾಹದಿಂದ ನೇಕಾರರ ಮನೆಗಳಿಗೆ ನೀರು ನುಗ್ಗಿ ಸಾವಿರಾರು ಪಾವರ್‌ಲೂಮ್ ಮತ್ತ ಕೈಮಗ್ಗಗಳು ವಾರಗಟ್ಟಲೇ ನೀರಲ್ಲಿ ನಿಂತು ನೇಕಾರರ ಬದುಕು ಕೊಚ್ಚಿಕೊಂಡು ಹೋಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಪ್ರತಿ ಪವರ್‌ಲೂಮ್‌ಗೆ 25 ಸಾವಿರ ರೂ. ಪರಿಹಾರ ಘೋಷಿಸಿ ಆದೇಶ ಹೊರಡಿಸಿದ್ದರು. ಆದರೆ ಅದಕ್ಕೆ ಕಂದಾಯ ಇಲಾಖೆ ಬ್ರೇಕ್ ಹಾಕಿ, ಪವರ್‌ಲೂಮ್ ಮಗ್ಗಗಳ ಪ್ರತಿ ಮಾಲೀಕರಿಗೆ 25 ಸಾವಿರ ಎಂದು ಘೋಷಿಸಿದೆ. ಪ್ರವಾಹ ಸಂತ್ರಸ್ತ ನೇಕಾರರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಅನ್ಯಾವಾಗಿದ್ದರೂ ಜಿಲ್ಲೆಯವರೇ ಆಗಿರುವ ಮೇಲ್ಮನೆ  ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ನಾಡಿನ ಮಠಗಳನ್ನು ಸುತ್ತಿ, ಶ್ರೀಗಳ ಆಶೀರ್ವಾದ ಪಡೆಯುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. 

ಮುಖ್ಯಮಂತ್ರಿಗಳ ಆದೇಶಕ್ಕೆ ವಿರುದ್ಧವಾದ ಆದೇಶವನ್ನು ಕಂದಾಯ ಇಲಾಖೆ ತೆಗೆದುಕೊಂಡು ಪ್ರವಾಹ ಸಂತ್ರಸ್ತ ನೇಕಾರರಿಗೆ ಅನ್ಯಾಯವಾಗಿದ್ದರೂ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಬೇಕಾದ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಮತ್ತು ಎಸ್ಸಾರ್ ತುಟಿ ಬಿಚ್ಚುತ್ತಿಲ್ಲ. ಇತರೇ ರಾಜಕೀಯ ಹೇಳಿಕೆಗಳ ಕುರಿತು ಕೂಡಲೇ ಪ್ರತಿಕ್ರಿಯಿಸುವ ಇವರು ಈ ವಿಷಯದಲ್ಲಿ ಮೌನ ವಹಿಸಿರುವುದು ಜಿಲ್ಲೆಯ ನೇಕಾರರಲ್ಲಿ ಸರ್ಕಾರಕ್ಕಿಂತ ಇವರ ಮೇಲೆ ಅಸಮಾಧಾನ ಕಾಣಿಸಿಕೊಂಡಿದೆ.

ಪ್ರವಾಹ ಸಂತ್ರಸ್ತ ನೇಕಾರರ ಪರಿಹಾರ ವಿತರಣೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ನೆಕಾರರು ಪ್ರತಿಭಟನೆಗೆ ಸಜ್ಜಾಗಿದ್ದು, ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಭಟನೆ ಕಾವು ಆರಂಭಗೊಂಡಿದೆ. ಪ್ರವಾಹ ಸಂತ್ರಸ್ತ ನೇಕಾರರ ಪ್ರತಿಭಟನೆಗೆ ಉಭಯ ನಾಯಕರೂ ಸಾಥ್ ನೀಡುವ ಮೂಲಕ ಆಗಿರುವ ಅನ್ಯಾಯ ಸರಿಪಡಿಸಲು ಎಷ್ಟರ ಮಟ್ಟಿಗೆ ಕಾರ್ಯ ಪ್ರವೃತ್ತರಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

-ವಿಠ್ಠಲ ಆರ್. ಬಲಕುಂದಿ

SCROLL FOR NEXT