ರಾಜ್ಯ

ಸಿದ್ದು ಅಡ್ಡಾದಲ್ಲಿ ಡಿಕೆಶಿ ಕಲರವ: ಕಾರ್ಯಕರ್ತರ ಸ್ವಾಗತ ನೋಡಿ ಅಚ್ಚರಿಗೊಂಡ 'ಕನಕಪುರ ಬಂಡೆ'

Manjula VN

ಮೈಸೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರಿಗೆ ಭೇಟಿ ನೀಡಿದ್ದು, ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದ್ದಾರೆ. 

ಗುರುವಾರ ಶತಾಬ್ದಿ ರೈಲಿನಲ್ಲಿ ಆಗಮಿಸಿದ ಶಿಕುಮಾರ್ ಅವರನ್ನು ಮೈಸೂರು ರೈಲ್ವೆ ನಿಲ್ದಾಣದಲ್ಲಿ ಶಾಸಕ ತನ್ವೀರ್ ಸೇಠ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಹೆಚ್.ಪಿ.ಮಂಜುನಾಥ್ ಸ್ವಾಗತಿಸಿದರು. ಅಲ್ಲಿಂದ ತೆರೆದ ವಾಹನದಲ್ಲಿ ಕಾಂಗ್ರೆಸ್ ಕಚೇರಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಹೆಚ್.ಸಿ.ದಾಸಪ್ಪ ವೃತ್ತದಲ್ಲಿ ಬೃಹತ್ ಸೇಬಿನ ಹಾರ ಹಾಕಿ ಸನ್ಮಾನಿಸಲಾಯಿತು. 

ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರು ಹಾಜರಾಗದೇ ಹೋದರೂ, ಅವರ ಪುತ್ರ ವರುಣ ಶಾಸಕ ಯತೀಂದ್ರ ಸಿದ್ದರಾಮಯ್ಯ ಹಾಜರಿದ್ದರು. ಅಲ್ಲದೆ, ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರನ್ನು ಯತೀಂದ್ರ ಕೊಂಡಾಡಿದ್ದರು. ಆದರೆ, ಸುದ್ದಿಗಾರರೊಬ್ಬರು ಸಿದ್ದರಾಮಯ್ಯ ಅವರನ್ನು ಡಿಕೆಶಿ ಬಗ್ಗೆ ಕೇಳಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ವರದಿಗಾರರ ಮೇಲೆ ಹರಿಹಾಯ್ದಿರುವ ಪ್ರಸಂಗ ನಡೆದಿದ್ದು, ಇದು ಕಾಂಗ್ರೆಸ್'ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಹಿರಂಗಪಡಿಸಿದೆ. 

ಸಿದ್ದರಾಮಯ್ಯ ತವರಿಗೆ ಡಿಕೆಶಿ ಭೇಟಿ ನೀಡುತ್ತಿರುವುದರಲ್ಲಿ ವಿಶೇಷವೇನೂ ಇಲ್ಲ. ಶಿವಕುಮಾರ್ ಅವರ ಪತ್ನಿ ಉಷಾ ಅವರು ಮೈಸೂರು ಮೂಲದವರಾಗಿದ್ದು, ಜೈಲಿನಿಂದ ಬಿಡುಗಡೆಯಾದ ಬಳಿಕ ಮೈಸೂರಿನ ದೇವಾಲಯಗಳಿಗೆ ಭೇಟಿ ನೀಡುವಂತೆ ಅವರ ಕುಟುಂಬ ಸದಸ್ಯರು ಸಲಹೆ ನೀಡಿದ್ದರು. ಹೀಗಾಗಿ ಮೈಸೂರಿಗೆ ಭೇಟಿ ನೀಡಿದ್ದಾರೆಂದು ಡಿಕೆಶಿ ತಂಡ ಮಾಹಿತಿ ನೀಡಿದೆ. 

ನಂಜನಗೂಡಿನ ನಂಜುಡೇಶ್ವರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿರುವ ಡಿಕೆ.ಶಿವಕುಮಾರ್ ಅವರು, ಜೈಲಿನಲ್ಲಿದ್ದಾಗ ಕಾರಾಗೃಹದಲ್ಲಿದ್ದ ಪುಟ್ಟ ದೇಗುಲಕ್ಕೆ ಭೇಟಿ ನೀಡುತ್ತಿದ್ದೆ ಎಂದು ಹೇಳಿದ್ದಾರೆ. 

ಮೈಸೂರು ಭೇಟಿ ವೇಳೆ ಡಿಕೆಶಿ ಮೈಸೂರಿನ ಗಣಪತಿ ಸಚಿದಾನಂದ ಸ್ವಾಮಿ ಆಶ್ರಮ, ಸುತ್ತೂರು ಶಿವರಾತ್ರೀಶ್ವರ ದೇಗುಲಕ್ಕೆ ಭೇಟಿ ನೀಡಿದರು. 

ಇನ್ನು ಶುಖ್ರವಾರ ಕೂಡ ಮೈಸೂರಿನಲ್ಲೇ ಇರುವ ಡಿಕೆಶಿ, ಈ ವೇಳೆ ಮಂಡ್ಯ, ಮದ್ದೂರು, ಚಾಮರಾಜನಗರ ಮತ್ತು ಇತರೆ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಬಳಿಕ ಸಂಜೆ ವೇಳೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆಂದು ತಿಳಿದುಬಂದಿದೆ. 

SCROLL FOR NEXT