ರಾಜ್ಯ

ಮುಂದುವರೆದ ವೈದ್ಯರ ಪ್ರತಿಭಟನೆ; ಅಶ್ವಿನಿ ಗೌಡ ಸೇರಿ ಹಲವು ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣು 

Manjula VN

ಬೆಂಗಳೂರು: ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ವೈದ್ಯರ ಮೇಲೆ ನಡೆಸಿದ ಹಲ್ಲೆ ಖಂಡಿಸಿ ಕಿರಿಯ ವೈದ್ಯರು ಇಂದು ರಾಜ್ಯಾದ್ಯಂತ ಎಲ್ಲಾ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ವಿಭಾಗ (ಒಪಿಡಿ) ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದಾರೆ.

ಪ್ರತಿಭಟನಾ ನಿರತರ ಮನವೊಲಿಕೆಗೆ ಉಪಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಹಾಗೂ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನಡೆಸುತ್ತಿರುವ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದು, ವೈದ್ಯರ ಪ್ರತಿಭಟನೆ ಮುಂದುವರೆದಿದೆ. 

ಈ ನಡುವೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ ಸೇರಿದಂತೆ ಹಲವು ಕಾರ್ಯಕರ್ತರು ಶರಣಾಗಿದ್ದಾರೆ. 

ಕಾರ್ಯಕರ್ತರು ಪೊಲೀಸರಿಗೆ ಶರಣಾದರೂ ಕೂಡ ನಮ್ಮ ಪ್ರತಿಭಟನೆ ಮುಂದುವರೆಯುವುದು ಎಂದು ವೈದ್ಯರು ಹೇಳಿದ್ದಾರೆ. 

ಈ ಹಿಂದೆ ಇದೇ ವೈದ್ಯರು ಕರವೇ ಕಾರ್ಯಕರ್ತರು ಮೊದಲು ಪೊಲೀಸರಿಗೆ ಶರಣಾಗಲಿ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದುಕೊಳ್ಳುತ್ತೇವೆಂದು ಹೇಳಿದ್ದರು. ಆದರೆ, ಕರವೇ ಕಾರ್ಯಕರ್ತರು ತಪ್ಪೊಪ್ಪಿಕೊಂಡಿದ್ದರು, ವೈದ್ಯರು ತಮ್ಮ ಹಠ ಬಿಡದೆ ಪ್ರತಿಭಟನೆ ಮುಂದುವರೆಸುತ್ತಿದ್ದಾರೆ. 
 
ಮಿಂಟೋ ಕಣ್ಣಿನ ಆಸ್ಪತ್ರೆಯ ಕಿರಿಯ ವೈದ್ಯರು ಸೇರಿದಂತೆ ರಾಜ್ಯದಾದ್ಯಂತ ಇತರೆ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೊರರೋಗಿಗಳ ವಿಭಾಗವನ್ನು ಮುಚ್ಚಲಾಗಿದ್ದು, ಇದರಿಂದ ರೋಗಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. 

ಮಿಂಟೋ ವೈದ್ಯರ ಒತ್ತಾಯಕ್ಕೆ ಮಣಿದು ನಾವು ಪೊಲೀಸರಿಗೆ ಶರಣಾಗುತ್ತಿಲ್ಲ. ರೋಗಿಗಳಿಗೆ ಸಮಸ್ಯೆಯಾಗಬಾರದು ಎಂಬ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಶರಣಾಗುತ್ತಿದ್ದೇವೆಂದು ಕರವೇ ಕಾರ್ಯಕರ್ತರು ತಿಳಿಸಿದ್ದಾರೆ. 

SCROLL FOR NEXT