ರಾಜ್ಯ

ಮುಸ್ಲಿಂ ಬಾಂಧವರು ಸಹ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಲಿ: ಸಿದ್ದರಾಮಯ್ಯ ಕರೆ

Lingaraj Badiger

ಮೈಸೂರು: ಸರ್ವೋಚ್ಛ ನ್ಯಾಯಾಲಯ ಶತಮಾನಗಳ ವಿವಾದಕ್ಕೆ ಅಂತಿಮ ತೆರೆ ಎಳೆದಿದೆ. ನ್ಯಾಯಾಲಯದ ತೀರ್ಪನ್ನು ಮುಸ್ಲಿಂ ಬಾಂಧವರು ಸಹ ಸ್ವೀಕರಿಸಬೇಕು ಎಂದು‌ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಹುಣಸೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸುನ್ನಿ ವಕ್ಫ್ ಮಂಡಳಿಗೆ ಪ್ರತ್ಯೇಕ ಜಮೀನು ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಸಂವಿಧಾನದಲ್ಲಿ ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ, ಸಹಬಾಳ್ವೆ ಇರಬೇಕು ಎಂದು ಹೇಳಲಾಗಿದೆ. ಹೀಗಾಗಿ ಎಲ್ಲರೂ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿ ಗೌರವಿಸಬೇಕು. ಹಿಂದೂ ಹಾಗೂ ಮುಸ್ಲಿಂ ಎಲ್ಲಾ ಧರ್ಮದವರು ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಬೇಕು ಎಂದು ಕರೆ ನೀಡಿದರು.

ಇದಕ್ಕು ಮುನ್ನ ಟ್ವೀಟ್ ಮಾಡಿರುವ ಮಾಜಿ ಸಿಎಂ, ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವ್ಯಾಜ್ಯದ ಸುಪ್ರೀಮ್ ಕೋರ್ಟ್ ತೀರ್ಪನ್ನು ಗೌರವಿಸೋಣ. ಪ್ರಜಾಪ್ರಭುತ್ವದ ಧರ್ಮವಾದ ಸಂವಿಧಾನದ ಮೇಲೆ ಭರವಸೆ ಇಡೋಣ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡೋಣ ಎಂದು ತಿಳಿಸಿದ್ದಾರೆ.

ಇನ್ನು ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ಪ್ರಕಟಿಸಿರುವ ತೀರ್ಪು ಯಾರ ಸೋಲೂ ಅಲ್ಲ, ಗೆಲುವೂ ಅಲ್ಲ. ಇದರ ಬಗ್ಗೆ ವೈಯಕ್ತಿಕ ಅಭಿಪ್ರಾಯಗಳಿಗೆ ಅವಕಾಶವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗೌರವಿಸಿದ್ದೇವೆ. ದೇಶದ ಮೂಲ ಸೈದ್ಧಾಂತಿಕ ನಿಲುವಿಗೆ ಅವಕಾಶ ಸಿಕ್ಕಿದೆ. ಜಾತ್ಯತೀತ ನಿಲುವಿಗೆ ಪೂರಕವಾಗಿ ತೀರ್ಪು ಬಂದಿದೆ. ಹಲವು ದಶಕಗಳ ವಿವಾದಕ್ಕೆ ಇದೀಗ ಅಂತ್ಯ ಸಿಕ್ಕಂತಾಗಿದೆ ಎಂದರು.

SCROLL FOR NEXT