ರಾಜ್ಯ

17 ಅನರ್ಹ ಶಾಸಕರ ಪ್ರಕರಣ: ನವೆಂಬರ್ 13ಕ್ಕೆ ಸುಪ್ರೀಂ ತೀರ್ಪು ಪ್ರಕಟ

Lingaraj Badiger

ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ 17 ಅನರ್ಹ ಶಾಸಕರ ಅರ್ಜಿ ಕುರಿತು ಸುಪ್ರೀಂ ಕೋರ್ಟ್ ನವೆಂಬರ್ 13ರಂದು ತೀರ್ಪು ಪ್ರಕಟಿಸಲಿದೆ.

ಅನರ್ಹತೆ ಪ್ರಶ್ನಿಸಿ 17 ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಎನ್. ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠ, 10 ದಿನಗಳ ಬಳಿಕ ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು. ಇಂದು ತೀರ್ಪು ಪ್ರಕಟಿಸುವ ದಿನಾಂಕ ನಿಗದಿ ಮಾಡಿದ್ದು, ಬಧವಾರ ಬೆಳಗ್ಗೆ ೧೦.೩೦ಕ್ಕೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.

ಅನರ್ಹ ಶಾಸಕರ ತೀರ್ಪು ಪ್ರಕಟಣೆಗಾಗಿ ಸುಪ್ರೀಂ ಕೋರ್ಟ್‌‌ನ ಪಟ್ಟಿಯಲ್ಲಿ ಪ್ರಕರಣ ಸಂಖ್ಯೆ ಹಾಗೂ ವಾದಿ - ಪ್ರತಿವಾದಿಗಳ ಹೆಸರನ್ನು ಪಟ್ಟಿಯಲ್ಲಿ ಪ್ರಕಟಿಸಲಾಗಿದೆ.

ಅನರ್ಹ ಶಾಸಕರ ಅರ್ಜಿ ಕುರಿತು ಈಗಾಗಲೇ ವಾದ - ಪ್ರತಿವಾದ ಆಲಿಸಿದ ಕೋರ್ಟ್ ತೀರ್ಪು ಕಾಯ್ದಿರಿಸಿದ್ದು, ತೀರ್ಪಿಗಾಗಿ ಅನರ್ಹ ಶಾಸಕರು ಕಾಯುತ್ತಿದ್ದಾರೆ.

ಸುಪ್ರೀಂ ತೀರ್ಪಿನ ಆಧಾರದ ಮೇಲೆ ಅನರ್ಹ ಶಾಸಕರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. 

ಮೈತ್ರಿ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಕಾಂಗ್ರೆಸ್ ನ 14 ಹಾಗೂ ಜೆಡಿಎಸ್‌ನ 3 ಶಾಸಕರನ್ನು ಅನರ್ಹಗೊಳಿಸಿದ್ದರು. ಇದನ್ನು ಪ್ರಶ್ನಿಸಿ 17 ಅನರ್ಹ ಶಾಸಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

SCROLL FOR NEXT