ರಾಜ್ಯ

ಬೆಂಗಳೂರು: ಕುಡಿದ ಅಮಲಿನಲ್ಲಿ ಸ್ನೇಹಿತರ ನಡುವೆ ಜಗಳ, ಇಬ್ಬರ ಕೊಲೆಯಲ್ಲಿ ಅಂತ್ಯ

Lingaraj Badiger

ಬೆಂಗಳೂರು: ಸ್ನೇಹಿತರ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಇಬ್ಬರ ಕೊಲೆಯಲ್ಲಿ ಅಂತ್ಯವಾದ ದಾರುಣ ಘಟನೆ ತಲ್ಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಿನಾಯಕನಗರದಲ್ಲಿ ನಡೆದಿದೆ.

ವಿನಾಯಕನಗರದ ಕೊಳಗೇರಿ ಪ್ರದೇಶದ ನಿವಾಸಿಗಳಾದ ಸುಬ್ರಮಣಿ(35) ಹಾಗೂ ಪೇಂಟರ್ ಸಂತೋಷ್ ಪಿಳೈ (33) ಕೊಲೆಯಾದವರು.

ಸುಬ್ರಮಣಿ ಗಾರೆ ಕೆಲಸ ಮಾಡುತ್ತಿದ್ದರೆ ಪಿಳ್ಳೆ ಪೈಂಟರ್ ಆಗಿ ಹಾಗೂ ಅವರ ಇತರ ಇಬ್ಬರು ಸ್ನೇಹಿತರಾದ ರವಿ ಹಾಗೂ ಮಹವೀರ ಸಹ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. 

ನಿನ್ನೆ ಭಾನುವಾರವಾದ್ದರಿಂದ ಈ ನಾಲ್ಕು ಮಂದಿ ಒಟ್ಟಿಗೆ ಪಾರ್ಟಿ ಮಾಡಲು ತಲಘಟ್ಟಪುರ ವ್ಯಾಪ್ತಿಯ ಭುವನೇಶ್ವರಿನಗರದ ಶನಿಮಹಾತ್ಮ ದೇವಸ್ಥಾನ ಹಿಂಭಾಗದ ಖಾಲಿ ಜಮೀನಿನ ಬಳಿ ಸಂಜೆ 6 ಗಂಟೆ ಸಮಯದಲ್ಲಿ ಹೋಗಿದ್ದಾರೆ. ನಾಲ್ವರು ಒಟ್ಟಾಗಿ ಮಾತನಾಡುತ್ತಾ ಪಾರ್ಟಿ ಮಾಡುತ್ತಿದ್ದಾಗ ನಶೆ ವೇಳೆ ಹಣಕಾಸು ವಿಚಾರವಾಗಿ ಇವರ ಮಧ್ಯೆ ರಾತ್ರಿ 8 ಗಂಟೆ ಸುಮಾರಿನಲ್ಲಿ ಜಗಳವಾಗಿದೆ.

ಜಗಳ ವಿಕೋಪಕ್ಕೆ ಹೋದಾಗ ಸುಬ್ರಮಣಿ ಹಾಲೋಬ್ರಿಕ್ಸ್‍ನಿಂದ ಸಂತೋಷ್‍ಗೆ ಹೊಡೆದಿದ್ದಾನೆ. ಇದರಿಂದ ಆಕ್ರೋಶಗೊಂಡ ಇನ್ನಿಬ್ಬರು ಸ್ನೇಹಿತರು ಸೇರಿ ಸುಬ್ರಮಣಿ ಮೇಲೂ ಹಾಲೋಬ್ರಿಕ್ಸ್‍ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಪರಿಣಾಮ ಸುಬ್ರಮಣಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಸಂತೋಷ್ ಕೆಂಪೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
    
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ರವಿ ಹಾಗೂ ಮಹವೀರ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

SCROLL FOR NEXT