ರಾಜ್ಯ

ತನ್ವೀರ್ ಮೇಲಿನ ದಾಳಿ ಹಿಂದೆ ಎಸ್'ಡಿಪಿಐ ಕೈವಾಡ: ಸಿದ್ದರಾಮಯ್ಯ ಆರೋಪ

Manjula VN

ಮೈಸೂರು: ಶಾಸಕ ತನ್ವೀರ್ ಸೇಠ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣದ ಹಿಂದೆ ಎಸ್'ಡಿಪಿಐ (ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ) ಕೈವಾಡವಿದೆ ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. 

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ವೀರ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಒಬ್ಬ ವ್ಯಕ್ತಿ ನಡೆಸಿದ ಕೃತ್ಯ ಇದಲ್ಲ. ದಾಳಿ ಪೂರ್ವನಿಯೋಜಿತವಾದದ್ದು. ದಾಳಿ ಪ್ರಕರಣವನ್ನ ಎಸ್ಐಟಿ ತನಿಖೆ ನಡೆಸಲಿದೆ. ತನಿಖೆಯಲ್ಲಿ ಸಂಘಟನೆಯ ಕೈವಾಡದ ಕುರಿತು ಬೆಳಕು ಚೆಲ್ಲಲಿದೆ. ಇತರೆ ಆರೋಪಿಗಳನ್ನೂ ಅಧಿಕಾರಿಗಳು ಬಂಧನಕ್ಕೊಳಪಡಿಸಬೇಕು. ದಾಳಿ ಪ್ರಕರಣದಲ್ಲಿ ಸಂಘಟನೆಯ ಕೈವಾಡವಿರುವುದು ಸಾಬೀತಾಗಿದ್ದೇ ಆದರೆ, ಸಂಘಟನೆಯ ಮೇಲೆ ನಿಷೇಧ ಹೇರುವಂತೆ ಒತ್ತಡ ಹೇರಲಾಗುತ್ತದೆ ಎಂದು ಹೇಳಿದ್ದಾರೆ. 
 
ತನ್ವೀರ್ ಸೇಠ್ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ರಾಜ್ಯದಲ್ಲಿ ಕುಸಿದುಬಿದ್ದಿರುವ ಶಾಂತಿ ಮತ್ತು ಸುವ್ಯವಸ್ಥೆಗೆ ಸಾಕ್ಷಿಯಾಗಿದೆ. ತನ್ವೀರ್ ಅವರು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ತಪ್ಪಿತಸ್ಥರನ್ನು ಬಂಧಿಸಿ, ಶಿಕ್ಷಿಸುವ ಜೊತೆಗೆ ಸಾರ್ವಜನಿಕ ಜೀವನದಲ್ಲಿರುವ ಗಣ್ಯರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಆಗ್ರಹಿಸುತ್ತೇನೆಂದು ತಿಳಿಸಿದ್ದಾರೆ.  

ಸಚಿವ ವಿ.ಸೋಮಣ್ಮ ಮಾತನಾಡಿ, ಉತ್ತಮ ಚಿಕಿತ್ಸೆಯ ಅಗತ್ಯವಿರುವುದೇ ಆದರೆ, ತನ್ವೀರ್ ಅವರನ್ನು ವಿಮಾನ ಮೂಲಕ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ. ತನ್ವೀರ್ ಅವರ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಘಟನೆ ಮುಖ್ಯಮಂತ್ರಿಗಳಿಗೂ ಆಘಾತವನ್ನುಂಟು ಮಾಡಿದೆ ಎಂದಿದ್ದಾರೆ.

SCROLL FOR NEXT