ರಾಜ್ಯ

ಶಿರಸಿ: ದರೋಡೆಗೆ ಹೊಂಚು ಹಾಕುತ್ತಿದ್ದವರ ಬಂಧನ

Shilpa D

ಶಿರಸಿ: ಶಿರಸಿ ರಸ್ತೆ ಮಾರ್ಗದಲ್ಲಿ ಸಾಗುವವರನ್ನು ಬೆದರಿಸಿ ದರೋಡೆ ಮಾಡಲು ಅಣಿಯಾಗಿದ್ದ ತಂಡವೊಂದರ ಕೃತ್ಯವನ್ನು ಬುಧವಾರ ಸಂಜೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಮೂಲಕ ಆಗಬಹುದಾಗಿದ್ದ ಅನಾಹುತ ತಪ್ಪಿಸಿದ್ದಾರೆ. 

ಇಲ್ಲಿಯ ಪಂಚವಟಿ ಸಮೀಪದ ಯಲ್ಲಾಪುರ ಮಾರ್ಗದಲ್ಲಿ ಹೋಗಿಬರುವವರನ್ನು ತಡೆದು ಹಣ ಮತ್ತು ಸ್ವತ್ತುಗಳನ್ನು ಕಿತ್ತುಕೊಂಡು ದರೋಡೆ ಮಾಡಲು 5ಮಂದಿ ತಂಡ ಸಿದ್ಧತೆ ನಡೆಸಿತ್ತು. ಮಾಹಿತಿ ಪಡೆದ ಪೊಲೀಸ್‌ರು ದಾಳಿ ನಡೆಸಿದರು. 

ಈ ಸಂದರ್ಭದಲ್ಲಿ ಗೋವಾ ರಾಜ್ಯದ ಅಲೆಕ್ಸ್ ರೋಡ್ರಿಗಸ್ ಮತ್ತು ಬ್ರೆಂನ್ ಅಲ್ಮೇಡಾ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಹಾಗೇ ಇನ್ನು ಮೂವರು ಆರೋಪಿಗಳಾದ ಡೇವಿಡ್ ಜುಜೇ ಫರ್ನಾಂಡಿಸ್ ಗೋವಾ, ಹಾಗೇ ಶಿರಸಿಯ ಮಂಜುನಾಥ ಪಾಠಣಕರ್ ಅಯ್ಯಪ್ಪನಗರ, ಪವನ ಪ್ರಕಾಶ ಪಾಲೇಕರ್ ಕೊಟ್ನಗೇರಿ ಎಂಬುವವರು ತಲೆಮರೆಸಿಕೊಂಡಿರುವ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. 

ಬಂಧಿತರಿಂದ ಬಡಿಗೆ, ಕಬ್ಬಿಣದ ರಾಡ್ ಹಾಗು ಖಾರದ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT