ರಾಜ್ಯ

ಗಾಂಧೀಜಿಯವರ ಪರಿಕಲ್ಪನೆಗಳನ್ನು ಪ್ರಧಾನಿ ಮೋದಿ ವಾಸ್ತವವಾಗಿಸುತ್ತಿದ್ದಾರೆ: ಕಟೀಲ್

Manjula VN

ಬೆಳಗಾವಿ: ರಾಷ್ಟ್ರಪತಿ ಮಹಾತ್ಮ ಗಾಂಧೀಜಿಯವರ ಪರಿಕಲ್ಪನೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಾಸ್ತವವಾಗಿರುತ್ತಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬುಧವಾರ ಹೇಳಿದ್ದಾರೆ. 

ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಹಿನ್ನಲೆಯಲ್ಲಿ ಬೆಳಗಾವಿಯ ವೀರಸೌಧದಲ್ಲಿ ಆಯೋಜಿಸಲಾಗಿದ್ದ ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಅವರು, ರಾಮರಾಜ್ಯ, ಸ್ವಚ್ಛತೆ, ಗ್ರಾಮ ಸ್ವರಾಜ್ಯ, ಸ್ವದೇಶೀಯಂತಹ ಮಹಾತ್ಮ ಗಾಂಧೀಜಿಯವರ ಪರಿಕಲ್ಪನೆಗಳನ್ನು ಸ್ವಚ್ಛ ಭಾರತ ಅಭಿಯಾನ, ಮೇಕ್ ಇನ್ ಇಂಡಿಯಾ, ಆಯುಷ್ಮಾನ್ ಭಾರತ್ ಮೂಲಕ ಪ್ರಧಾನಿ ಮೋದಿ ವಾಸ್ತವವಾಗಿರುತ್ತಿದ್ದಾರೆಂದು ಹೇಳಿದ್ದಾರೆ.
 
ಇದು ನನ್ನ ಜೀವನದ ಅತ್ಯಂತ ಮುಖ್ಯವಾದ ದಿನವಾಗಿದೆ. 1924ರಲ್ಲಿ ಮಹಾತ್ಮಗಾಂಧೀಜಿಯವರು ಕಾಂಗ್ರೆಸ್ ಅಧ್ಯಕ್ಷತೆ ವಹಿಸಿದ್ದ ಭೂಮಿಯಲ್ಲಿ ನಾನಿಂದು ಜನರನ್ನು ಉದ್ದೇಶಿಸಿ ಮಾತನಾಡುವ ಅವಕಾಶ ಸಿಕ್ಕಿದೆ. ಗಾಂಧೀಜಿ ನಡೆಸಿದ್ದ ಪಾದಯಾತ್ರೆ ಸ್ಥಳದಲ್ಲಿ ನಾನೂ ಕೂಡ ಪಾದಯಾತ್ರೆ ಆರಂಭಿಸುತ್ತಿದ್ದೇನೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ಗಾಂಧೀಜಿ ಹೊಸ ಮಾರ್ಗವನ್ನು ಸೂಚಿಸಿದ್ದರು. ಸತ್ಯಾಗ್ರಹ, ದಂಡಿ ಸತ್ಯಾಗ್ರಹದ ಮೂಲಕ ಪ್ರತೀ ಮನೆಯನ್ನೂ ತಲುಪಿದ್ದರು ಎಂದು ತಿಳಿಸಿದ್ದಾರೆ. ಈ ವೇಳೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಕಟೀಲ್ ಅವರು ಕೊಂಡಾಡಿದ್ದಾರೆ. ಇದಲ್ಲದೆ, ನೆಹರೂ ಅವರ ಹೆಸರನ್ನು ಹೇಳದೆಯೇ ನೆಹರೂ ಬಗ್ಗೆ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. 

ಭಾರತಕ್ಕೆ ಸ್ವಾತಂತ್ರ್ಯ ಬಳಿಕ ಅಧಿಕಾರಕ್ಕಾಗಿ ಕೆಲವರು ಗಾಂಧೀಜಿಯವರನ್ನು ಹೋರಾಟಕ್ಕಷ್ಟೇ ಸೀಮಿತ ಮಾಡಿದ್ದರು. ಆದರೂ ದೇಶದ ಪಿತಾಮಹ ಆಗುವಲ್ಲಿ ಅವರನ್ನು ಯಾರೂ ತಡೆಯಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. 

ಭಾಷಣದ ಬಳಿಕ ಗಾಂಧೀಜಿಯವರ ಜನಪ್ರಿಯ ಭಜನೆಯನ್ನು ಮಾಡಿದರು. ರಘುಪತಿ ರಾಘವ ರಾಜಾರಾಮ್ ಎಂದು ಹೇಳಿದ ಬಳಿಕ ಅಲ್ಲಾಹ್ ಬದಲಿಗೆ ಈಶ್ವರ ದೇವ ತೇರಾ ನಾಮ್ ಎಂದು ಹೇಳಿದರು. ಬಳಿಕ ವಿವಾದ ಸೃಷ್ಟಿಯಾಗುವುದನ್ನು ಮನಗಂಡ ಅವರು ಮತ್ತೆ ಈಶ್ವರ ಅಲ್ಲಾಹ್ ತೇರಾ ನಾಮ್ ಎಂದು ಹೇಳಿದರು. 

SCROLL FOR NEXT