ರಾಜ್ಯ

ನೆರೆ ಪರಿಹಾರ ಬಿಡುಗಡೆಯಲ್ಲಿ ವಿಳಂಬ: ಕ್ಷಮೆಯಾಚಿಸಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು

Manjula VN

ಬೆಂಗಳೂರು: ಪ್ರವಾಹ ಪರಿಹಾರ ನೀಡುವ ವಿಚಾರದಲ್ಲಿ ವಿಳಂಬವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಗುರುವಾರ ಕ್ಷಮೆಯಾಚಿಸಿದ್ದಾರೆ. 

ಸುದ್ದಿಗಾರರಗೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆಯಾಗಲು ತಡವಾಗುತ್ತಿದೆ. ನಾವು ಅದನ್ನು ಒಪ್ಪಿಕೊಳ್ಳುತ್ತೇವೆ. ಇದಕ್ಕೆ ಜನತೆ ಬಳಿ ಕ್ಷಮೆಯಾಚಿಸುತ್ತೇನೆ. ಈ ಹಿಂದೆ ಕೇಂದ್ರ ಸರ್ಕಾರ ಶೀಘ್ರಗತಿಯಲ್ಲಿ ಪರಿಹಾರ ಬಿಡುಗಡೆ ಮಾಡುತ್ತಿತ್ತು. ಆದರೆ, ಇದೀಗ ತಡವಾಗುತ್ತಿದೆ. ಪ್ರಸ್ತುತ ನೆರೆ ಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸುತ್ತಿದ್ದು, ರೂ.38,000ಕೋಟಿಗೂ ಹೆಚ್ಚು ನಷ್ಟದತ್ತ ಸಾಗಿದೆ. ವರದಿ ಬಂದ ಕೂಡಲೇ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಪರಿಹಾರ ಬಿಡುಗಡೆಯಲ್ಲಿ ಈಗಾಗಲೇ ತಡವಾಗಿದೆ. ಶೀಘ್ರದಲ್ಲೇ ಪರಿಹಾರ ಸಿಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. 

ಅಂತರ್ ಸಚಿವಾಲಯದ ತಂಡ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ರಾಜ್ಯದ ಹಲವು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಶೀಘ್ರದಲ್ಲಿಯೇ ಪರಿಹಾರ ಬಿಡುಗಡೆಯಾಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 

ಅನಂತ್ ಕುಮಾರ್ ಬದುಕಿದಿದ್ದರೆ, ನಾವು ಇಂತಹ ಪರಿಸ್ಥಿತಿಯನ್ನು ನೋಡಬೇಕಿರಲಿಲ್ಲ. ಅನಂತ್ ಕುಮಾರ್ ಮೂಲಕ ಮೋದಿಯವರ ಮನವೊಲಿಸಿ ಕೇಂದ್ರದಿಂದ ಪರಿಹಾರ ಪಡೆದುಕೊಳ್ಳುತ್ತಿದ್ದೆವು. ಆದರೆ, ಪ್ರಸ್ತುತ ರಾಜ್ಯದ ಪರಿಸ್ಥಿತಿಯನ್ನು ಪ್ರಧಾನಮಂತ್ರಿಗಳಿಗೆ ವಿವರಿಸುವ ಯಾವುದೇ ನಾಯಕರು ನಮ್ಮಲ್ಲಿಲ್ಲದಂತಾಗಿರುವುದು ದುರಾದೃಷ್ಟಕರ ಸಂಗತಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. 

SCROLL FOR NEXT