ರಾಜ್ಯ

ಪರಮೇಶ್ವರ್ ಪಿಎ ರಮೇಶ್'ನನ್ನು ವಿಚಾರಣೆಗೊಳಪಡಿಸಿಲ್ಲ: ಆರೋಪ ನಿರಾಕರಿಸಿದ ಐಟಿ ಅಧಿಕಾರಿಗಳು

Manjula VN

ಬೆಂಗಳೂರು: ಐಟಿ ಅಧಿಕಾರಿಗಳ ಕಿರುಕುಳಕ್ಕೆ ಹೆದರಿಸಿ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆಂಬ ಆರೋಪವನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಘಳು ತಿರಸ್ಕರಿಸಿದ್ದಾರೆ. 

ಆರೋಪ ಸಂಬಂಧ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಪ್ರಕರಣ ಸಂಬಂಧ ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಕುಮಾರ್ ಅವರ ಮನೆಯಲ್ಲಿ ಪರಿಶೀಲನೆ ನಡೆಸಿಲ್ಲ. ರಮೇಶ್ ಅವರನ್ನೂ ವಿಚಾರಣೆಗೊಳಪಡಿಸಿಲ್ಲ ಎಂದು ತಿಳಿಸಿದ್ದಾರೆ. 

ಅಕ್ಟೋಬರ್ 10 ರಂದು ಪರಮೇಶ್ವರ್ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ದಾಳಿ ವೇಳೆ ಪರಮೇಶ್ವರ್ ಸ್ಥಳದಲ್ಲಿರಲಿಲ್ಲ. ಪರಮೇಶ್ವರ್ ಅವರು ಕೊರಟಗೆರೆಗೆ ಹೋಗಿದ್ದಾರೆಂದು ಅವರ ಪತ್ನಿ ತಿಳಿಸಿದ್ದರು. ಬಳಿಕ ಕೊರಟಗೆರೆಗೆ ತಂಡವೊಂದು ತೆರಳಿತ್ತು. ಕೊರಟಗೆರೆಯಿಂದ ಪಮೇಶ್ವರ್ ಅವರನ್ನು ಬೆಂಗಳೂರಿಗೆ ಕರೆತರಲಾಗಿತ್ತು. ಈ ವೇಳೆ ರಮೇಶ್ ಅವರು ಪರಮೇಶ್ವರ್ ಅವರ ಜೊತೆಗಿದ್ದರು. ದಾಳಿ ವೇಳೆ ಪರಮೇಶ್ವರ್ ಮನೆಯಲ್ಲಿ ರಮೇಶ್ ಕೂಡ ಇದ್ದರು.  ಬಳಿಕ ರಮೇಶ್ ಅವರ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗಿತ್ತು. ಬೆಳಗಿನ ಜಾವ 2.45ರವರೆಗೂ ಕಾರ್ಯಾಚರಣೆ ನಡೆದಿದ್ದು, ಅಲ್ಲಿಯವರೆಗೂ ರಮೇಶ್ ಸ್ಥಳದಲ್ಲಿಯೇ ಇದ್ದರು. ಪಂಚನಾಮದಲ್ಲಿ ರಮೇಶ್ ಅವರು ಪರಮೇಶ್ವರ್ ಅವರ ಮನೆಯಲ್ಲಿದ್ದಿದ್ದನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದಿದ್ದಾರೆ. 

ಇವಿಷ್ಟು ಬಿಟ್ಟರೆ ರಮೇಶ್ ಮನೆ ಮೇಲೆ ನಾವು ಯಾವುದೇ ದಾಳಿ ನಡೆಸಿಲ್ಲ. ಆದಾಯ ತೆರಿಗೆ ಇಲಾಖೆ ಕಾಯಿದೆ ಸೆಕ್ಷನ್ 131 ಅಥವಾ 132 (4)ಬಿ ಅಡಿಯಲ್ಲೂ ರಮೇಶ್ ಅವರ ಹೇಳಿಕೆ ದಾಖಲಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

SCROLL FOR NEXT