ತುಮಕೂರು: ಮ್ಯಾಗಿ ಮಾಡಲು ಬಾಲಕನೋರ್ವ ಗ್ಯಾಸ್ ಸ್ವೌ ಹಚ್ಚಲು ಹೋಗಿ ಅನಿಲ ಸೋರಿಕೆಯಾಗಿ ಬೆಂಕಿ ತಗುಲಿ ಮೃತಪಟ್ಟಿರುವ ದುರ್ಘಟನೆ ನಗರದ ಕ್ರಿಶ್ಚಿಯನ್ ಸ್ಟ್ರೀಟ್ನಲ್ಲಿ ನಡೆದಿದೆ.
7 ವರ್ಷದ ನೋಯಲ್ ಪ್ರಸಾದ್ ಎಂಬ ಬಾಲಕ ಪಾಲಕರಿಗೆ ತಾನೇ ಮ್ಯಾಗಿ ಮಾಡುವುದಾಗಿ ತಿಳಿಸಿದ್ದ. ನಂತರ ಅಡುಗೆ ಮನೆಗೆ ಹೋಗಿ ಗ್ಯಾಸ್ ಸ್ಟೌ ಆನ್ ಮಾಡಿದ್ದಾನೆ.
ಆದರೆ, ಲೈಟರ್ನಲ್ಲಿ ಬೆಂಕಿ ಹಚ್ಚಲು ತಡ ಮಾಡಿದ ಕಾರಣ ಜಾಸ್ತಿ ಗ್ಯಾಸ್ ಸೋರಿಕೆ ಆಗಿದೆ. ಬಳಿಕ ಒಮ್ಮೆಲೇ ಜೋರಾಗಿ ಬೆಂಕಿ ಹೊತ್ತುಕೊಂಡು ಬಾಲಕ ತೀವ್ರವಾಗಿ ಗಾಯಗೊಂಡಿದ್ದನು. ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತುಮಕೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.