ರಾಜ್ಯ

ಮೀಟರ್ ಬಡ್ಡಿ ಕಿರುಕುಳ: ಟೀ ಅಂಗಡಿ ಮಾಲೀಕ ಆತ್ಮಹತ್ಯೆಗೆ ಶರಣು

Manjula VN

ಕಲಬುರಗಿ: ಮೀಟರ್ ಬಡ್ಡಿ ಕಿರುಕುಳಕ್ಕೆ ಬೇಸತ್ತು ಚಹಾ ಅಂಗಡಿ ಮಾಲೀಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಸುಂದರ್ ನಗರದಲ್ಲಿ ಗುರುವಾರ ರಾತ್ರಿ ನಡೆದಿದೆ.

38 ವರ್ಷದ ರಮೇಶ್ ಗಾಜರೆ ಎಂಬುವವರು ಡೆತ್ ನೋಟ್ ಬರೆದಿಟ್ಟು ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಕಲಬುರಗಿ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಚಹಾ ಅಂಗಡಿ ಇಟ್ಟುಕೊಂಡಿದ್ದ ಅವರು, ಖಾಸಗಿಯಾಗಿ 40 ಸಾವಿರ ರೂ.ಸಾಲ ಪಡೆದಿದ್ದರು.

ಮೀಟರ್ ಬಡ್ಡಿಯಂತೆ ಹಣ ವಸೂಲಿಗೆ ಮುಂದಾಗಿದ್ದ ಸಾಲಗಾರರು ವಾರಕ್ಕೆ ಹತ್ತು ಸಾವಿರ ರೂಪಾಯಿಂತೆ ವಸೂಲಿ ಮಾಡುತ್ತಿದ್ದರು. ಕೆಲ ವಾರಗಳ ಕಾಲ ಹತ್ತು ಸಾವಿರ ರೂಪಾಯಿ ಬಡ್ಡಿ ನೀಡಿದ್ದ ರಮೇಶ್ , ನಂತರ ಬಡ್ಡಿ ನೀಡುವುದಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ನಿನ್ನೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಘಟನೆಗೆ ಸಂಬಂಧಿಸಿಂತೆ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ನಗರ ಪೊಲೀಸ್ ಆಯುಕ್ತ ಎಮ್‌ಎನ್ ನಾಗರಾಜ್ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ದಿಲ್ಲದೇ, ಕಲಬುರಗಿ ನಗರದಲ್ಲಿ  ಮೀಟರ್‌ಬಡ್ಡಿ ದಂಧೆ ನಡೆಯುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಈ ಹಿಂದೆ ಸ್ವಲ್ಪಮಟ್ಟಿಗೆ ಹತೋಟಿಯಲ್ಲಿತ್ತು. ಆದರೀಗ ಕೆಲ ಫೈನಾನ್ಸ್‌ ನಡೆಸುವವರು ಎರಡು ಪಟ್ಟು ಸಾಲ ವಸೂಲಿ ಮಾಡುತ್ತಿದ್ದಾರೆ. ಆಯಾ ಠಾಣಾ ವ್ಯಾಪ್ತಿಗಳಲ್ಲಿ ಇಂಥ ಚಟುವಟಿಗಳ ಮೇಲೆ ನಿಗಾ ವಹಿಸಿ ಮೀಟರ್‌ಬಡ್ಡಿ ದಂಧೆಗೆ ಕಡಿವಾಣ ಹಾಕಲಾಗುವುದು ಎಂದು ಅವರು ತಿಳಿಸಿದರು.

SCROLL FOR NEXT