ರಾಜ್ಯ

ಅನರ್ಹ ಶಾಸಕರ ಪ್ರಕರಣ: ಇಂದು 'ಸುಪ್ರೀಂ'ನಲ್ಲಿ ಮಹತ್ವದ ವಿಚಾರಣೆ

Manjula VN

ನವದೆಹಲಿ: ತಮ್ಮನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ 17 ಪದಚ್ಯುತ ಶಾಸಕರು ಸಲ್ಲಿಸಿದ್ದ ಅರ್ಜಿಯ ಮಹತ್ವದ ವಿಚಾರಣೆ ಬುಧವಾರ ಸುಪ್ರೀಂಕೋರ್ಟ್'ನಲ್ಲಿ ನಡೆಯಲಿದೆ. 

ಶಾಸಕ ಸ್ಥಾನದಿಂದ ತಮ್ಮನ್ನು ಅನರ್ಹಗೊಳಿಸಿದ್ದನ್ನು ಶಾಸಕರು ಸಲ್ಲಿಸಿದ್ದ ಅರ್ಜಿ ಕುರಿತಂತೆ ನ್ಯಾಯಾಲಯ ಇಂದು ಮಹತ್ವದ ವಿಚಾರಣೆ ನಡೆಸಲಿದೆ. ಈ ಮಧ್ಯೆ, ಚುನಾವಣಾ ನೀತಿ ಸಂಹಿತೆ ಕುರಿತು ರಾಜ್ಯ ಕಾಂಗ್ರೆಸ್ ಕರ್ನಾಟಕ ಹೈಕೋರ್ಟ್'ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ತಡೆ ನೀಡುವಂತೆ ಸುಪ್ರೀಂಕೋರ್ಟ್'ನ್ನು ಕೋರಲು ಚುನಾವಣಾ ಆಯೋಗಕ್ಕೆ ಅವಕಾಶವೂ ಸಿಕ್ಕಿದೆ. 

ಈ ಹಿಂದೆ ನಿಗದಿಪಡಿಸಿದಂತೆ ಮಂಗಳವಾರ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾ.ಎನ್.ವಿ ರಮಣ, ನ್ಯಾ.ಸಂಜೀವ್ ಖನ್ನಾ ಮತ್ತು ನ್ಯಾ.ಕೃಷ್ಣ ಮುರಾರಿ ಅವರನ್ನು ಒಳಗೊಂಡ ತ್ರಿಸದಸ್ಯ ನ್ಯಾಯಪೀಠದ ಮುಂದೆ ಚುನಾವಣಾ ಆಯೋಗದ ಪರ ಹಿರಿಯ ವಕೀಲ ರಾಕೇಶ್ ದ್ವಿವೇದಿ, ಅನರ್ಹತೆ ಮತ್ತು ಉಪ ಚುನಾವಣೆ ಸಂಬಂಧಿಸಿದ ಪ್ರಕರಣ ಸುಪ್ರೀಂಕೋರ್ಟ್'ನಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ, ಪ್ರಕರಣದಲ್ಲಿನ ಪ್ರತಿವಾದಿಯಾಗಿರುವ ಮತ್ತು ಪ್ರಕರಣದ ಬಗೆಗಿನ ಪೂರ್ಣ ಮಾಹಿತಿ ಇದ್ದರೂ ಕಾಂಗ್ರೆಸ್ ಪಕ್ಷವು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ ಎಂದು ದೂರಿದರು. 

ಈ ವೇಳೆ ನ್ಯಾಯಪೀಠವು ಪ್ರಕರಣದ ವಿಚಾರಣೆ ಇಲ್ಲಿ ನಡೆಯುತ್ತಿದ್ದರೂ ಹೈಕೋರ್ಟ್'ನಲ್ಲಿ ದಾವೆ ಹೂಡಿದ್ದು ಏಕೆ? ನಿಮ್ಮ ಮುಂದೆಯೇ ಚುನಾವಣೆ ಮುಂದೂಡುವ ತೀರ್ಮಾನಕ್ಕೆ ಬಂದಿರಲಿಲ್ಲವೇ ಎಂದು ಕಾಂಗ್ರೆಸ್'ನ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಪರ ಹಾಜರಾಗಿದ್ದ ಹಿರಿಯ ವಕೀಲ ಶಶಿಕಿರಣ್ ಶೆಟ್ಟಿ, ನಾವು ಹೈಕೋರ್ಟ್'ನಲ್ಲಿ ನೀತಿ ಸಂಹಿತೆ ಜಾರಿಯಾಗದ್ದನ್ನು ಪ್ರಶ್ನಿಸಿದ್ದೇವೆ. ಚುನಾವಣೆ ಮುಂದೂಡಬೇಕು ಎಂದಲ್ಲ ಎಂದರು. 

SCROLL FOR NEXT