ರಾಜ್ಯ

ಮಂಗ, ಕಾಡು ಪ್ರಾಣಿಗಳನ್ನು ಮನೆಯಲ್ಲೇ ಇಟ್ಟುಕೊಳ್ಳಲಿ: ಬಿ.ವೈ. ರಾಘವೇಂದ್ರ ಹೇಳಿಕೆಗೆ ಪರಿಸರವಾದಿಗಳ ವಿರೋಧ

Manjula VN

ಶಿವಮೊಗ್ಗ: ಕಾಡು ಪ್ರಾಣಿಗಳ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ, ವನ್ಯಜೀವಿ ಹೋರಾಟಗಾರರು ತಮ್ಮ ತಮ್ಮ ಮನೆಗಳಲ್ಲಿಯೇ ಮಂಗಗಳು ಕಾಡುಪ್ರಾಣಿಗಳನ್ನು ಇಟ್ಟುಕೊಳ್ಳಲಿ ಎಂದು ಶಿವಮೊಗ್ಗ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದ್ದಾರೆ. 

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಮಳೆಹಾನಿ ಕುರಿತು ಪರಿಶೀಲನೆ ನಡೆಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವನ್ಯಜೀವಿ ಹೋರಾಟಗಾರರು ಮಂಕಿ ಪಾರ್ಕ್'ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪರಿಸರವನ್ನು ರಕ್ಷಣೆ ಮಾಡುವುದು ಮುಖ್ಯವಾದದ್ದು ನಿಜ. ಆದರೆ, ರೈತರ ಹಿತಾಸಕ್ತಿಯನ್ನೂ ನೋಡಬೇಕು. ಕಾಡು ಪ್ರಾಣಿಗಳು ರೈತರಿಗೆ ಸಮಸ್ಯೆಯನ್ನುಂಟು ಮಾಡುತ್ತಿವೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ಕಾಡು ಪ್ರಾಣಿಗಳನ್ನು ಝೂನಲ್ಲಿ ಇಡಬೇಕಿದೆ. ಕಾಡು ಪ್ರಾಣಿಗಳ ಮೇಲೆ ವನ್ಯಜೀವಿ ಹೋರಾಟಗಾರರಿಗೆ ಅಷ್ಟೊಂದು ಪ್ರೀತಿ ಇದ್ದರೆ, ಮಂಗ, ಕಾಡನೆ ಹಾಗೂ ಕಾಡು ಪ್ರಾಣಿಗಳನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಳ್ಳಲಿ ಎಂದು ಹೇಳಿದ್ದಾರೆ. 

ರಾಘವೇಂದ್ರ ಅವರ ಹೇಳಿಕೆಗೆ ವನ್ಯಜೀವಿ ಹೋರಾಟಗಾರ ಅಖಿಲೇಶ್ ಚಿಪ್ಲಿ ಎಂಬುವವರು ಪ್ರತಿಕ್ರಿಯೆ ನೀಡಿದ್ದು, ಕಾಡು ಪ್ರಾಣಿಗಳನ್ನು ದತ್ತು ಪಡೆದುಕೊಳ್ಳಲು ಪರಿಸರ ಹೋರಾಟಗಾರರು ಸಿದ್ಧರಿದ್ದೇವೆ. ಇದಕ್ಕೆ ಸರ್ಕಾರ ಅನುಮತಿ ನೀಡಲಿ. ಸಂಸದರು ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಮಂಕಿ ಪಾರ್ಕ್ ಉತ್ತಮ ಆಲೋಚನೆಯಲ್ಲ ಎಂದು ಹೇಳಿದ್ದಾರೆ. 

ಕಾಡುಗಳಲ್ಲಿ ಆಹಾರ ಸಂಪನ್ಮೂಲಗಳು ಕ್ಷೀಮಿಸಿದಾಗ ಕೋತಿಗಳು ಮಾನವ ಆವಾಸಸ್ಥಾನಗಳಿಗೆ ವಲಸೆ ಹೋಗುತ್ತವೆ. ಶೆಟ್ಟಿಹಳ್ಳಿ ಅರಣ್ಯ ಪ್ರದೇಶದಲ್ಲಿ ಪ್ರಭಾವಿ ರಾಜಕಾರಣಿಗಳು ಶೈಕ್ಷಣಿಕ ಸಂಸ್ಥೆಗಳನ್ನು ನಿರ್ಮಾಣ ಮಾಡಿವೆ. ಕೃಷಿಗಾಗಿ ಬಳಕೆ ಮಾಡಿದ್ದ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಕೋತಿಗಳ ಆವಾಸಸ್ಥಾನಗಳು ಕ್ಷೀಣಿಸುತ್ತಿವೆ. ಹೀಗಾಗಿ ಆಹಾರ ಅರಸಿ ಮಾನವನ ಆವಾಸಸ್ಥಾನಗಳಿಗೆ ಬರುತ್ತಿವೆ ಎಂದು ಮತ್ತೊಬ್ಬ ಹೋರಾಟಗಾರ ಅಜಯ್ ಕುಮಾರ್ ಶರ್ಮಾ ತಿಳಿಸಿದ್ದಾರೆ. 

SCROLL FOR NEXT