ಮಡಿಕೇರಿ: ಕೊಡಗು ಜಿಲ್ಲೆಯ ನಿವಾಸಿಗಳು ಪಿಸ್ತೂಲ್, ರಿವಾಲ್ವರ್ ಹಾಗೂ ಡಬಲ್ -ಬ್ಯಾರಲ್ ಬಂದೂಕು ಸೇರಿದಂತೆ ಶಸ್ತ್ರಾಸ್ತ್ರ ಹೊಂದಲು ಪರವಾನಗಿ ಪಡೆಯಬೇಕೆಂಬ ನಿಬಂಧನೆಯಿಂದ ನೀಡಲಾಗಿರುವ "ವಿನಾಯಿತಿ" ಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ.
ಪರವಾನಗಿ ವಿನಾಯಿತಿಯನ್ನು 2029ರವರೆಗೆ ವಿಸ್ತರಿಸಿ ಕೇಂದ್ರ ಗೃಹ ಸಚಿವಾಲಯ ಬುಧವಾರ ಅಧಿಸೂಚನೆ ಹೊರಡಿಸಿದೆ.
ಶಸ್ತ್ರಾಸ್ತ್ರ ಪರವಾನಗಿ ವಿನಾಯಿತಿ ಪಡೆದುಕೊಂಡಿರುವ ದೇಶದ ಏಕೈಕ ಸಮುದಾಯ ಕೊಡವ ಜನಾಂಗವಾಗಿದೆ.
ಬ್ರಿಟಿಷ್ ಆಳ್ವಿಕೆ ಕಾಲದಿಂದಲೂ ನೀಡಲಾಗುತ್ತಿರುವ ಈ ವಿನಾಯಿತಿಯನ್ನು ಸ್ವಾತಂತ್ರೃ ನಂತರ 1959 ರ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3 ಮತ್ತು 4 ರನ್ವಯ ಕೂರ್ಗ್ ಬೈ ರೇಸ್ ಹಾಗೂ ಜಮ್ಮಾ ಹಿಡುವಳಿದಾರರಿಗೆ ಕೋವಿ ಹೊಂದಲು ಇರುವ ಪರವಾನಗಿ ವಿನಾಯಿತಿ ಮುಂದುವರಿಸಲು 1963 ರಲ್ಲಿ ಕೇಂದ್ರ ಸರ್ಕಾರ ವಿಶೇಷ ಆದೇಶ ಹೊರಡಿಸಿತ್ತು.