ರಾಜ್ಯ

ಬಡವರಿಗೆ ವರದಾನವಾಗಲು ಬೆಂಗಳೂರು, ಮೈಸೂರು ರೈಲು ನಿಲ್ದಾಣಗಳಲ್ಲಿ ಸಾರ್ವಜನಿಕ ಫ್ರಿಡ್ಜ್ ಸ್ಥಾಪನೆ 

Sumana Upadhyaya

ಬೆಂಗಳೂರು: ಭಾರತೀಯ ರೈಲ್ವೆ ಇಲಾಖೆ ಬೆಂಗಳೂರು ಮತ್ತು ಮೈಸೂರು ರೈಲು ನಿಲ್ದಾಣದಲ್ಲಿ ಬಡವರಿಗಾಗಿ ಸಾರ್ವಜನಿಕ ರೆಫ್ರಿಜರೇಟರ್ ಗಳನ್ನು ತೆರೆಯಲು ಮುಂದಾಗಿದೆ.


ಕಳೆದ ಆಗಸ್ಟ್ 15ರಂದು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸಾರ್ವಜನಿಕ ರೆಫ್ರಿಜರೇಟರ್ ನ್ನು ತೆರೆಯಲಾಗಿತ್ತು. ಆಹಾರವನ್ನು ಹಾಳು ಮಾಡುವ ಬದಲು ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ತಿನಿಸುಗಳನ್ನು ಮಾರುವವರು ಹೆಚ್ಚಿನ ಆಹಾರಗಳನ್ನು ಈ ಫ್ರಿಜ್ ಒಳಗೆ ಇಡಬಹುದು. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ರಾಷ್ಟ್ರಮಟ್ಟದಲ್ಲಿ ಕೂಡ ಸುದ್ದಿಯಾಗಿತ್ತು.


ಈ ಹಿನ್ನಲೆಯಲ್ಲಿ ರೈಲ್ವೆ ಇಲಾಖೆ ಬೆಂಗಳೂರು ಮತ್ತು ಮೈಸೂರುಗಳಲ್ಲಿ ಸಹ ರೆಫ್ರಿಜರೇಟರ್ ತೆರೆಯಲು ಮುಂದಾಗಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ನೈರುತ್ಯ ರೈಲ್ವೆ ಇಲಾಖೆ ಪ್ರಧಾನ ವ್ಯವಸ್ಥಾಪಕ ಎ ಕೆ ಸಿಂಗ್, ಹುಬ್ಬಳ್ಳಿಯಲ್ಲಿ ಇದರಿಂದ ಅನೇಕ ಬಡವರಿಗೆ ಸಹಾಯವಾಗುತ್ತಿದೆ. ಇದೇ ರೀತಿ ಬೆಂಗಳೂರು ಮತ್ತು ಮೈಸೂರು ರೈಲು ನಿಲ್ದಾಣಗಳಲ್ಲಿ ಕೂಡ ಆರಂಭಿಸಲು ಹೇಳಿದ್ದೇನೆ ಎಂದರು.


ಜನರಿಂದ ಸಿಕ್ಕಿದ ಅಭೂತಪೂರ್ವ ಪ್ರತಿಕ್ರಿಯೆ ನೋಡಿ ಲಯನ್ಸ್ ಕ್ಲಬ್ ನ ಶಾಖೆಗಳು ಇತ್ತೀಚೆಗೆ ರೆಫ್ರಿಜರೇಟರ್ ಪಕ್ಕದಲ್ಲಿ ಅಲ್ಮೆರಾ ಇರಿಸಿದ್ದರು. ಜನರು ತಮಗೆ ಬೇಡವಾದ ಬಟ್ಟೆಗಳನ್ನು ಅಲ್ಲಿ ಬಿಡಬಹುದು. ಇದು ಕೂಡ ಅನೇಕರಿಗೆ ಉಪಯೋಗವಾಯಿತು.


ಬೆಂಗಳೂರು ವಿಭಾಗ ರೈಲ್ವೆ ವ್ಯವಸ್ಥಾಪಕ ಅಶೋಕ್ ಸಿಂಗ್ ವರ್ಮ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಎರಡು ಅಥವಾ ಮೂರು ರೈಲ್ವೆ ನಿಲ್ದಾಣಗಳಲ್ಲಿ ಫ್ರಿಜ್ ಸ್ಥಾಪಿಸಲು ನಾವು ಯೋಜನೆ ಹಾಕಿಕೊಂಡಿದ್ದೇವೆ.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಗಳಲ್ಲಿ ಸ್ಥಾಪಿಸಲಾಗುವುದು. ಸರಿಯಾದ ಸ್ಥಳವನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದರು.


ರೆಫ್ರಿಜರೇಟರ್ ಖರೀದಿಸಲು ಧನ ಸಹಾಯ ಮಾಡುವವರು ಮಾಡಬಹುದು ಎಂದು ಹೇಳಿದರು.

SCROLL FOR NEXT