ರಾಜ್ಯ

ಸಿಎಂ ಬಿಎಸ್ ವೈ-ಫಡ್ನವೀಸ್ ಮಾತುಕತೆ: ಮಹದಾಯಿ, ಕೃಷ್ಣಾ ತೀರ್ಪಿನ  ಗೆಜೆಟ್ ಅಧಿಸೂಚನೆಗೆ ಕೇಂದ್ರಕ್ಕೆ ಜಂಟಿ ಮನವಿ ಸಲ್ಲಿಕೆಗೆ ನಿರ್ಧಾರ

Raghavendra Adiga

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಮುಂಬೈನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿರುವ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಮಹದಾಯಿ ಹಾಗೂ ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ಗೆಜೆಟ್ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರಕ್ಕೆ ಜಂಟಿ ಮನವಿ ಮಾಡಲು ತೀರ್ಮಾನಿಸಿದ್ದಾರೆ. ಅಲ್ಲದೆ ರಾಜ್ಯಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಚರ್ಚೆಯೂ ಇಬ್ಬರೂ ಮುಖ್ಯಮಂತ್ರಿಗಳು ಮಾತುತೆ ನಡೆಸಿದ್ದಾರೆ.

ಗಣೇಶ ಚತುರ್ಥಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೀಡಿದ ಆಹ್ವಾನದ ಮೇರೆಗೆ ಮುಂಬೈಗೆ ತೆರಳಿರುವ ಯಡಿಯೂರಪ್ಪ ನೇತೃತ್ವದ ತಂಡ ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ಅವರ ಜೊತೆ ಹಲವು ವಿಷಯಗಳ ಕುರಿತು ಮಹತ್ವದ ಚೆರ್ಚೆ ನಡೆಸಿದರು.

ಮಹದಾಯಿ ನದಿ ನೀರು ನ್ಯಾಯಾಧಿಕರಣ ನೀರು ಹಂಚಿಕೆ ಮಾಡಿ ಹೊರಡಿಸಿರುವ ಆದೇಶವನ್ನು ಗೆಜೆಟ್ ಅಧಿಸೂಚನೆ ಹೊರಡಿಸಬೇಕಾಗಿದೆ.ಈ‌ ನಿಟ್ಟಿನಲ್ಲಿ ಕರ್ನಾಟಕ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಮುಖ್ಯಮಂತ್ರಿ ಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸಿ ಶೀಘ್ರವೇ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು‌ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಮುಖ್ಯಮಂತ್ರಿ ಕಾರ್ಯಾಲಯ ತಿಳಿಸಿದೆ.

ಉತ್ತರ ಕರ್ನಾಟಕದ  ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ ಸೇರಿದಂತೆ ಕೆಲವು ಭಾಗಗಳಿಗೆ ಶಾಶ್ವತವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಮಹದಾಯಿ ಯೋಜನೆ ಅಗತ್ಯವಿದ್ದು ಇದಕ್ಕಾಗಿ ಸಮುದ್ರಕ್ಕೆ ಸೇರುವ ಹೆಚ್ಚುವರಿ ನೀರನ್ನಷ್ಟೇ ಬಳಸಿಕೊಳ್ಳುತ್ತೇವೆ. ಮಹದಾಯಿ ನದಿಯಿಂದ ಖಾನಾಪುರ ಸಮೀಪ ಇರುವ ಕಳಸಾ ಮತ್ತು ಬಂಡೂರಿ ನಾಲಾ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಇದರಿಂದ ನದಿ ಮೂಲಕ್ಕೆ ಯಾವ ಧಕ್ಕೆಯಾಗುವುದಿಲ್ಲ. ಪರ್ಸರಕ್ಕೆ ಹಾನಿಯಾಗದ ರೀತಿಯಲ್ಲಿ ಯೋಜನೆ ಅನುಷ್ಟಾನಗೊಳ್ಳುತ್ತದೆ ಎಂದು ಸಿಎಂ ಯಡಿಯೂರಪ್ಪ  ಫಡ್ನವೀಸ್‍ಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.

ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಗಾರು ಪ್ರಾರಂಭವಾದ ಕೂಡಲೇ ಕೊಯ್ನಾ ಜಲಾಶಯದಿಂದ ಹಂತ ಹಂತವಾಗಿ ನೀರು ಬಿಡುವಂತೆ ಹಾಗು ಈ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಉನ್ನತ ಮಟ್ಟದ ಸಮನ್ವಯ ಸಮಿತಿಯನ್ನು ರಚಿಸಲು ತೀರ್ಮಾನಿಸಿದ್ದು ಮಾತ್ರವಲ್ಲದೆ ಮುಂಬಯಿ ಬೆಂಗಳೂರು ಕೈಗಾರಿಕಾ ಕಾರಿಡಾರ್ ರಚನೆಗೆ ಈಗಾಗಲೇ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು ಈ ಯೋಜನೆಗೆ ಚಾಲನೆ ನೀಡುವ ಬಗ್ಗೆ ಉಭಯ ಸರ್ಕಾರಗಳು ಜಂಟಿಯಾಗಿ ಮನವಿ ಸಲ್ಲಿಸಲು ನಿರ್ದರಿಸಲಾಯಿತು.

ಗೋವಾ ಸರ್ಕಾರ ನ್ಯಾಯಾಧೀಕರಣದಿಂದಲೇ ವಿವಾದ ಇತ್ಯರ್ಥವಾಗಬೇಕೆಂದು ಪಟ್ಟು ಹಿಡಿದಿದೆ. ಅಲ್ಲಿಯವರೆಗೆ ಯೋಜನೆ ಅನುಷ್ಟಾನಗೊಳ್ಲಬಾರದೆಂದು ಅದು ವಾದಿಸುತ್ತಿದೆ. ಹಾಗಾಗಿ ಮೂರೂ ರಾಜ್ಯದ ಮುಖ್ಯಸ್ಥರು ಮಾತುಕತೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಬಗೆಗೆ ಆಲೋಚಿಸಬೇಕಿದೆ ಎಂದರು.. 

ಆಗಸ್ಟ್ ನಲ್ಲಿ ಮಹಾರಾಷ್ಟ್ರ ಹಾಗು ಕರ್ನಾಟಕದಲ್ಲಿ ಉದ್ಬವಿಸಿದ ಪ್ರವಾಹ ಪರಿಸ್ಥಿತಿಯ ನಿರ್ವಹಣೆ ಹಾಗು ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಅನುದಾನ ಒದಗಿಸುವಂತೆಯು ಎರಡು ರಾಜ್ಯಗಳಿಂದ ಜಂಟಿಯಾಗಿ ಮನವಿ ಸಲ್ಲಿಸಲು ತೀರ್ಮಾನ ಮಾಡಲಾಯಿತು.

ಯಡಿಯೂರಪ್ಪ ಅವರ ಮನವಿಗೆ ಮಹಾರಾಷ್ಟ್ರ ಸಿಎಂ ಸಹ ಸಕಾರಾತ್ಮಕವಾಗಿ ಪ್ರತಿಕ್ರಯಿಸಿದ್ದು ಗೋವಾ ಜತೆ ಮಾತುಕತೆ ನಡೆಸಲು ಸಮ್ಮತಿಸಿದ್ದಾಗಿ ತಿಳಿದುಬಂದಿದೆ.

ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗು ಮಹಾರಾಷ್ಟ್ರ ರಾಜ್ಯದ ನೀರಾವರಿ ಸಚಿವರಾದ ಗಿರೀಶ್ ದತ್ತಾತ್ರೇಯ ಮಹಾಜನ್ ಹಾಗು ಇಂಧನ ಸಚಿವರಾದ ಚಂದ್ರಶೇಖರ್ ಕಿಶನ್ ರಾವ್ ಉಪಸ್ಥಿತರಿದ್ದರು.

SCROLL FOR NEXT