ರಾಜ್ಯ

ಡಿಕೆಶಿ ಬಂಧನ ವಿರೋಧಿಸಿ ಗುರುವಾರ ರಾಮನಗರ ಜಿಲ್ಲಾ ಬಂದ್ : ಬಿಗಿ ಪೊಲೀಸ್ ಬಂದೋಬಸ್ತ್ 

Nagaraja AB

ರಾಮನಗರ: ನೋಟ್ ರದ್ದತಿ ವೇಳೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಸೆಪ್ಟೆಂಬರ್ 13ರವರೆಗೂ ಇಡಿ ವಶಕ್ಕೆ ನ್ಯಾಯಾಲಯ ಒಪ್ಪಿಸಿರುವುದರಿಂದ ಅವರ ತವರು ಜಿಲ್ಲೆ ರಾಮನಗರದಲ್ಲಿ ಆಕ್ರೋಶ ಭುಗಿಲೆದಿದೆ

ಡಿಕೆ ಶಿವಕುಮಾರ್ ಬಂಧನ  ವಿರೋಧಿಸಿ ಗುರುವಾರ ರಾಮನಗರ ಜಿಲ್ಲಾ ಬಂದ್ ಗೆ ಕಾಂಗ್ರೆಸ್ ಮುಖಂಡರು ಕರೆ ನೀಡಿದ್ದಾರೆ. ಗುರುವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಬಂದ್ ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆಯೂ ಕೂಡಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಆದೇಶ ಹೊರಡಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೇಂದ್ರ ವಲಯ ಐಜಿಪಿ ಶರತ್ ಚಂದ್ರ ನೇತೃತ್ವದಲ್ಲಿ ಮೂವರು ಐಪಿಎಸ್ ಅಧಿಕಾರಿಗಳು, 35 ಪಿಎಸ್ ಐ, 15 ಕೆಎಸ್ ಆರ್ ಪಿ, 21 ಡಿಎಆರ್ ತುಕಡಿಗಳು ಸೇರಿದಂತೆ 1 ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ..

ಈ ಮಧ್ಯೆ ಕನಕಪುರದಲ್ಲಿ  ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

SCROLL FOR NEXT