ಹುಬ್ಬಳ್ಳಿ: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ದಾಂಡೇಲಿಯಲ್ಲಿ ಸಂಚಾರಕ್ಕೆ ಸಂಚಕಾರ ಎದುರಾಗಿದ್ದು, ಪ್ರವಾಸಕ್ಕೆಂದು ಬರುತ್ತಿರುವ ಜನರು ಇಲ್ಲಿನ ಹದಗೆಟ್ಟಿರುವ ರಸ್ತೆಗಳನ್ನು ಕಂಡು ಬೇಸರಗೊಳ್ಳುತ್ತಿದ್ದಾರೆ.
ದಾಂಡೇಲಿಯ ಸುತ್ತಮುತ್ತಲಿರುವ ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ನಡೆಸಲಾಗುತ್ತಿದ್ದ ಸಫಾರಿ ಕಳೆದ ಮೂರು ವಾರಗಳಿಂದ ಬಂದ್ ಆಗಿದ್ದು, ಪ್ರವಾಸಕ್ಕೆಂದು ತೆರಳುತ್ತಿರುವ ಪ್ರವಾಸಿಗರು ಇದೀಗ ಬೇಸರಗೊಂಡು ಹಿಂದಿರುತ್ತಿದ್ದಾರೆ.
ಕಳೆದ ಹಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ದಾಂಡೇಲಿಯಲ್ಲಿನ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದೆ. ಹುಲಿ ಸಂರಕ್ಷಿತಾರಣ್ಯದ ಸುತ್ತೆಲ್ಲ ರಸ್ತೆಗಳು ಗುಂಡಿ ಬಿದ್ದಿವೆ. ಹೀಗಾರಿ ಸಫಾರಿ ತೆರಳುವುದನ್ನು ಬಂದ್ ಮಾಡಲಾಗಿದೆ.
ಅರಣ್ಯ ಇಲಾಖೆ ಹಾಗೂ ಪರಿಸರ ಅಭಿವೃದ್ಧಿ ಸಮಿತಿ ನಡುವೆ ಸಮನ್ವಯದ ಕೊರತೆ ಇರುವುದರಿಂದ ರಸ್ತೆಗಳ ದುರಸ್ಥಿ ಕಾರ್ಯ ಶೀಘ್ರಗತಿಯಲ್ಲಿ ಸಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಸಫಾರಿಯನ್ನು ಬಂದ್ ಮಾಡುವುದರಿಂದ ಪ್ರವಾಸೋದ್ಯಕ್ಕೆ ಅಷ್ಟೇ ಅಲ್ಲದೆ, ದಾಡೇಲಿ ಕುರಿತಂತೆ ಜನರಲ್ಲಿರುವ ಅಭಿಪ್ರಾಯಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಚಳಿಗಾಲ ಆರಂಭಕ್ಕೂ ಮುನ್ನ ರಸ್ತೆಗಳ ದುರಸ್ಥಿ ಕಾರ್ಯ ನಡೆಸುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೂ, ಈ ಬಗ್ಗೆ ಅಧಿಕಾರಿಗಳು ಕಿವಿಗೊಡುತ್ತಿಲ್ಲ ಸಫಾರಿ ಚಾಲಕರು ಹೇಳಿದ್ದಾರೆ.
ಈ ಬಗ್ಗೆ ಹಿರಿಯ ಆಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಅತೀ ಹೆಚ್ಚು ಮಳೆಯಾದ್ದರಿಂದ ಪ್ರಸಕ್ತ ಸಾಲಿನಲ್ಲಿ ಚಳಿಗಾಲದಲ್ಲಿ ಸಫಾರಿಯನ್ನು ಬಂದ್ ಮಾಡಲಾಗಿದೆ. ರಸ್ತೆಗಳು ಸಫಾರಿ ತೆರಳು ಯೋಗ್ಯವಾಗಿಲ್ಲ ಎಂದು ಹೇಳಿದ್ದಾರೆ.
ಕೆಲ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದೆ. ರಸ್ತೆಗಳು ಗುಂಡಿ ಬಿದ್ದಿರುವುದರಿಂದ ಸಫಾರಿ ವಾಹನಗಳು ಗುಂಡಿಯಲ್ಲಿ ಸಿಲುಕಿಕೊಳ್ಳುತ್ತವೆ. ಸಫಾರಿ ಮತ್ತೆ ಆರಂಭವಾಗಲು ಮತ್ತಷ್ಟು ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.