ರಾಜ್ಯ

ಆರೋಪಿಗೆ ಠಾಣೆಯಲ್ಲಿ ಅಮಾನುಷ ಹಲ್ಲೆ: ಸುಬ್ರಹ್ಮಣ್ಯನಗರ ಸಬ್ ಇನ್ಸ್ ಪೆಕ್ಟರ್ ಅಮಾನತು

Lingaraj Badiger

ಬೆಂಗಳೂರು: ಪ್ರಕರಣವೊಂದರ ಆರೋಪಿಗೆ ಠಾಣೆಯಲ್ಲಿ ಅಮಾನುಷವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಶ್ರೀಕಂಠೇಗೌಡ ಅವರನ್ನು ಅಮಾನತು ಮಾಡಲಾಗಿದೆ.

ಕಳೆದ ಮೇ ತಿಂಗಳಲ್ಲಿ ಪ್ರಕರಣವೊಂದರ ಆರೋಪಿಯ ಎರಡೂ ಕಾಲನ್ನು ಕಟ್ಟಿ ಹಾಕಿ ಪಾದಕ್ಕೆ  ಸುಬ್ರಹ್ಮಣ್ಯನಗರ ಎಸ್‍ಐ ಶ್ರೀಕಂಠೇಗೌಡ ಅವರು ಠಾಣೆಯಲ್ಲೇ ಹೊಡೆಯುತ್ತಿದ್ದ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 

ಇದನ್ನು ಗಂಭೀರವಾಗಿ ಪರಿಗಣಿಸಿರುವ ಡಿಸಿಪಿ ಎನ್​.  ಶಶಿಕುಮಾರ್ ಅವರು ಎಸ್‍ಐ ಶ್ರೀಕಂಠೇಗೌಡ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಎಸ್​ಐ ಅಮಾನುಷವಾಗಿ ಹೊಡೆಯುತ್ತಿದ್ದ ವೀಡಿಯೋವನ್ನು ವೀಕ್ಷಿಸಿದ್ದ ಬಳಿಕ ಡಿಸಿಪಿ ಎನ್​.  ಶಶಿಕುಮಾರ್ ಅವರು ಈ ಬಗ್ಗೆ ವರದಿ ನೀಡುವಂತೆ ಎಸಿಪಿಗೆ ಸೂಚಿಸಿದ್ದರು. 

ಎಸಿಪಿ ಠಾಣೆಗೆ ತೆರಳಿ ಈ ಬಗ್ಗೆ ವಿವರ ಪಡೆದು ವರದಿ ತಯಾರಿಸಿದ್ದರು. ಅದರಂತೆ ಎಸ್​ಐ  ಶ್ರೀಕಂಠೇಗೌಡ ಅವರನ್ನು ಅಮಾನತು ಮಾಡಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT