ರಾಜ್ಯ

ಇಡಿ ಸಮನ್ಸ್ ಹಿನ್ನಲೆ: ವಿಚಾರಣೆಗೆ ಹಾಜರಾದ ಡಿಕೆಶಿ ಪುತ್ರಿ ಐಶ್ವರ್ಯಾ

Srinivasamurthy VN

ದೆಹಲಿಯ ಜಾರಿ ನಿರ್ದೇಶನಾಲಯಕ್ಕೆ ಆಗಮಿಸಿರುವ ಡಿಕೆಶಿ ಪುತ್ರಿ ಐಶ್ವರ್ಯಾ

ಬೆಂಗಳೂರು: ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಮಾಜಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಇಂದು ಇಡಿ ಕಚೇರಿಗೆ ತೆರಳಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಡಿಕೆ ಶಿವಕುಮಾರ್ ಅವರ ದೆಹಲಿ ನಿವಾಸದ ಮೇಲೆ ಈ ಹಿಂದೆ ನಡೆದಿದ್ದ ಐಟಿ ದಾಳಿ ವೇಳೆ ಸಿಕ್ಕ ಅಪಾರ ಹಣ ಮತ್ತು ದಾಖಲೆಪತ್ರಗಳ ಕುರಿತಂತೆ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದ್ದು, ಪ್ರಕರಣ ಸಂಬಂಧ ಈಗಾಗಲೇ ಡಿಕೆ ಶಿವಕುಮಾರ್ ಅವರನ್ನು ವಶಕ್ಕೆ ಪಡೆದಿದೆ. ಅಲ್ಲದೆ ಇದೀಗ ವಿಚಾರಣೆಯ ಮುಂದುವರಿದ ಭಾಗ ಎಂಬಂತೆ ಡಿಕೆಶಿ ಪುತ್ರಿ ಐಶ್ವರ್ಯಾ ಅವರಿಗೂ ಇಡಿ ಬುಧವಾರ ಸಮನ್ಸ್ ಜಾರಿ ಮಾಡಿತ್ತು. ಅಂತೆಯೇ ಸಮನ್ಸ್ ಪಡೆದಿರುವ ಐಶ್ವರ್ಯ, ತಾಯಿ ಸುಮಾ ಹಾಗೂ ಕುಣಿಗಲ್ ಶಾಸಕ ರಂಗನಾಥ್ ಜೊತೆ ದೆಹಲಿಗೆ ತೆರಳಿದ್ದು, ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಲೋಕನಾಯಕ ಭವನದಲ್ಲಿರುವ ಇಡಿ ಪ್ರಧಾನ ಕಚೇರಿಗೆ ಆಗಮಿಸಿದ ಐಶ್ವರ್ಯಾ ಇಡಿ ಆಧಿಕಾರಿಗಳ ಭೇಟಿ ಮಾಡಿದ್ದಾರೆ. ಈಗಾಗಲೇ ವಿಚಾರಣೆ ಆರಂಭವಾಗಿದ್ದು, ಸಂಜೆಯವರೆಗೂ ವಿಚಾರಣೆ ಎದುರಿಸಲಿದ್ದಾರೆ. ಸಂಜೆ ಬಳಿಕ ಅವರನ್ನು ಮನೆಗೆ ಕಳುಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಹಗರಿಬೊಮನಹಳ್ಳಿಯ ಸೋಲಾರ್ ಪ್ಲಾಂಟ್ ಸೋಲ್ಸ್ ಆಂಡ್ ಸೇಲ್ಸ್, ಸೋಲ್ ಅರೆನಾ ಮಾಲ್‍ನಲ್ಲಿ ಪಾಲುದಾರಿಕೆ, ಉತ್ತರಹಳ್ಳಿಯಲ್ಲಿ ಅಜ್ಜಿಯಿಂದ 3 ಎಕರೆ ಗಿಫ್ಟ್ ಡೀಡ್, ಆರ್.ಆರ್ ನಗರದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ, ನ್ಯಾಷನಲ್ ಹಿಲ್ ವ್ಯೂ ಸ್ಕೂಲ್‍ನಲ್ಲಿ ಪಾತ್ರ, ಹಾಗೂ ಶ್ರೀರಾಮ್ ಫೈನಾನ್ಸಿನಲ್ಲಿ ಇರುವ ಪಾಲುದಾರಿಕೆ ಬಗ್ಗೆ ಐಶ್ವರ್ಯಗೆ ಇಡಿ ಪ್ರಶ್ನೆಗಳನ್ನು ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಹಿಂದೆ ಸಮನ್ಸ್ ಜಾರಿ ಮಾಡಿ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದ್ದಕ್ಕೆ ಡಿಕೆ ಶಿವಕುಮಾರ್ ಬಂಧನಕ್ಕೆ ಒಳಗಾಗಿದ್ದರು. ಈಗ ಪುತ್ರಿಗೂ ಸಮನ್ಸ್ ಜಾರಿಯಾಗಿದ್ದು ಸರಿಯಾದ ಉತ್ತರ ನೀಡದೇ ಇದ್ದರೆ ಐಶ್ವರ್ಯಾ ಸಹ ಬಂಧನವಾಗುವ ಸಾಧ್ಯತೆಯಿದೆ. 

SCROLL FOR NEXT