ರಾಜ್ಯ

ಪ್ರವಾಹಕ್ಕೆ ಬೆಳೆ ಸಂಪೂರ್ಣ ನಾಶ; ಬೇಸತ್ತ ಚಿಕ್ಕಮಗಳೂರಿನ ರೈತ ಗುಂಡಿಕ್ಕಿ ಆತ್ಮಹತ್ಯೆ 

Sumana Upadhyaya

ಚಿಕ್ಕಮಗಳೂರು: ಇತ್ತೀಚಿನ ಪ್ರವಾಹದಿಂದ ಬೆಳೆಯಲ್ಲಿ ಅಪಾರ ನಷ್ಟ ಅನುಭವಿಸಿದ್ದ ರೈತ ನೊಂದು ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನ ಕಳಸದ ಕರಗದ್ದೆ ಗ್ರಾಮದಲ್ಲಿ ನಡೆದಿದೆ.


ಮೃತ ರೈತನನ್ನು ಚನ್ನಪ್ಪ ಗೌಡ ಎಂದು ಗುರುತಿಸಲಾಗಿದೆ. ಕಳೆದ ತಿಂಗಳು ತೀವ್ರ ಪ್ರವಾಹಕ್ಕೆ 5 ಎಕರೆ ಕಾಫಿ, ಅಡಿಕೆ, ಕಾಳು ಮೆಣಸು ತೋಟ ನೀರಿಗೆ ಕೊಚ್ಚಿ ಹೋಗಿತ್ತು, ಭೂ ಕುಸಿತಕ್ಕೆ ಅವರ ಮನೆ ಕೂಡ ಹಾನಿಗೀಡಾಗಿತ್ತು. 


ಇಷ್ಟೆಲ್ಲ ಘಟನೆಗಳು ಆದ ಬಳಿಕ ಚನ್ನಪ್ಪ ಗೌಡ ತೀವ್ರ ನೊಂದಿದ್ದರು. ಇದರಿಂದಾಗಿಯೇ ಒತ್ತಡಕ್ಕೊಳಗಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.


ಮೃತ ರೈತ ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಸರ್ಕಾರದಿಂದ ಪರಿಹಾರ ಕೊಡುತ್ತೇವೆ ಎಂದು ಹೇಳುತ್ತಿದ್ದರೂ ನಮಗೆ ಇದುವರೆಗೆ ಸಿಕ್ಕಿಲ್ಲ, ಅದರಿಂದಲೇ ಪತಿ ತೀವ್ರ ನೊಂದಿದ್ದರು ಎನ್ನುತ್ತಾರೆ ಪತ್ನಿ ನೇತ್ರಾ.


ಕಳಸದಲ್ಲಿ ರೈತ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮ್ಮ ಗಮನಕ್ಕೆ ಬಂದಿದ್ದು ಈ ಬಗ್ಗೆ ವಿವರ ಕೇಳಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಕೂಡಲೇ 5 ಲಕ್ಷ ರೂಪಾಯಿ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸಿಎಂ ಆದೇಶಿಸಿದ್ದಾರೆ.

SCROLL FOR NEXT