ರಾಜ್ಯ

ಡಿಕೆಶಿ ಮೇಲ್ಮನವಿ ವಜಾ: ಆಪ್ತರಿಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್ 

Nagaraja AB

ಬೆಂಗಳೂರು:ನೋಟು ರದ್ದತಿ ವೇಳೆಯಲ್ಲಿ ದೆಹಲಿ ನಿವಾಸದಲ್ಲಿ ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ರದ್ದುಗೊಳಿಸಲು  ನಿರಾಕರಿಸಿದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕಾಂಗ್ರೆಸ್ ಮುಖಂಡ, ಶಾಸಕ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಇಂದು ವಜಾಗೊಳಿಸಿದೆ.

ಸೋಮವಾರ ಮೇಲ್ಮನವಿ ತೀರ್ಪು ಕಾಯ್ದಿರಿಸಿದ್ದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಪಿ.ಎಂ. ನವಾಜ್ ಅವರಿದ್ದ ವಿಭಾಗೀಯ ಪೀಠ, ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ಮಂಗಳವಾರ ಅರ್ಜಿಯನ್ನು ವಜಾಗೊಳಿಸಿರುವುದಾಗಿ ಆದೇಶ ಹೊರಡಿಸಿತು.

ಏಕಸದಸ್ಯ ಪೀಠ, ಸಿಆರ್ ಪಿಸಿ ಸೆಕ್ಷನ್ 482 ರ ಅಡಿಯಲ್ಲಿ ತೀರ್ಪು ನೀಡಿದ್ದರಿಂದ ಹೈಕೋರ್ಟ್ ನಲ್ಲಿಯೇ ಅದರ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಈ ಸೆಕ್ಷನ್ ನೀಡಿದ ತೀರ್ಪನ್ನು ಅರ್ಜಿದಾರರು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲು ಅವಕಾಶವಿದೆ. ಆದ್ದರಿಂದ ತಾಂತ್ರಿಕ ಕಾರಣಗಳಿಂದ ಮೇಲ್ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.

ಮತ್ತೊಂದೆದೆ ಇದೇ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರ ಆಪ್ತರನ್ನು ನಾಲ್ಕು ವಾರಗಳ ಕಾಲ ಬಂಧಿಸಿದಂತೆ ಇಡಿಗೆ ಹೈಕೋರ್ಟ್ ಇಂದು ಆದೇಶ ನೀಡಿದೆ

ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಬೇಕಾಗಿರುವುದರಿಂದ ಡಿಕೆ ಶಿವಕುಮಾರ್ ಅವರ ಆಪ್ತರನ್ನು ಬಂಧಿಸದೆ ರಕ್ಷಣೆ ನೀಡುವಂತೆ ವಕೀಲರು ಮಾಡಿದ ಮನವಿ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಭಾಗೀಯ ಪೀಠ, ಈ ಆದೇಶ ನೀಡಿದೆ. 

ಮಧ್ಯಂತರ ಆದೇಶವನ್ನು ಮುಂದುವರೆಸುವಂತೆ ಡಿಕೆಶಿ ಆಪ್ತರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಆಪ್ತರಾದ ಸುನೀಲ್ ಶರ್ಮಾ ಸೇರಿದಂತೆ ಇನ್ನಿತರ ಆಪ್ತರಿಗೆ ನಾಲ್ಕು ವಾರಗಳ ಕಾಲ ರಿಲೀಫ್ ಸಿಕ್ಕಂತಾಗಿದೆ. 

SCROLL FOR NEXT