ರಾಜ್ಯ

ಅಸಹಾಯಕ ಮಹಿಳೆಯರನ್ನು ಮೋಸ ಮಾಡುತ್ತಿದ್ದ ವಂಚಕನ ಬಂಧನ

Nagaraja AB

ಬೆಂಗಳೂರು: ಮನೆ ಕೊಡಿಸುವುದಾಗಿ ಹಾಗೂ ಮದುವೆ ಆಗುವುದಾಗಿ ನಂಬಿಸಿ ಅಸಹಾಯಕ ಹೆಣ್ಣುಮಕ್ಕಳನ್ನು ಮೋಸ ಮಾಡುತ್ತಿದ್ದ ವಂಚಕನನ್ನು ಆರ್.ಎಂ.ಸಿ.ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.ಮೈಸೂರು ನಗರದ ಸರಸ್ವತಿಪುರಂ ನಿವಾಸಿ ಎನ್.ಆರ್.ಗಣೇಶ್ ಅಲಿಯಾಸ್ ವಿಕ್ರಮ್  (45) ಬಂಧಿತ ಆರೋಪಿ.

ಬ್ರಾಹ್ಮಿ ಮ್ಯಾಟರಿಮೋನಿಯಲ್‍ ಮೂಲಕ 2018 ರಲ್ಲಿ ತಮ್ಮನ್ನು ಭೇಟಿ ಆಗಿ ಮದುವೆ ಮಾಡಿಕೊಂಡಿದ್ದ.  ಮಾತ್ರವಲ್ಲ ಇನ್ನಿತರ ಮೂವರು ಹೆಣ್ಣುಮಕ್ಕಳನ್ನೂ ಮದುವೆಯಾಗಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣೆಗೆ ವಿಧವೆಯೊಬ್ಬರು ದೂರು ದಾಖಲಿಸಿದ್ದರು.

ಪ್ರಕರಣದ ಜಾಡು ಹಿಡಿದ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಈತ 10ನೇ ತರಗತಿಯವರೆಗೆ ಓದಿದ್ದು, ಬ್ಯಾಂಕ್‍ಗಳಲ್ಲಿ ಸಾಲ ಹಾಗೂ ನಿವೇಶನ ಅಥವಾ ಫ್ಲಾಟ್ ಕೊಡಿಸುವ ಕೆಲಸ ಮಾಡುತ್ತಿದ್ದು, ವಯೋವೃದ್ಧರಿಗೆ, ವಿಧವೆ ಮತ್ತು ಅಸಹಾಯಕ ಹೆಣ್ಣು ಮಕ್ಕಳಿಗೆ ಮದುವೆಯಾಗುತ್ತೇನೆಂದು ನಂಬಿಸಿ ಮೋಸ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ 15 ವರ್ಷಗಳ ಹಿಂದೆ ರಾಜಾಜಿನಗರದ ಸವಿತಾ ಆರ್ ಎಂಬುವವರನ್ನು ಮದುವೆಯಾಗಿದ್ದ. ನಂತರ ಯಾರಿಗೂ ಗೊತ್ತಾಗದಂತೆ ನಾಲ್ಕು ಮದುವೆಯಾಗಿ ಮೋಸ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಯಿಂದ ಇತರೆ ಯಾರಾದರೂ ವಂಚನೆಗೊಳಗಾಗಿದ್ದಲ್ಲಿ ಸಾರ್ವಜನಿಕರು ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣೆ, ಉತ್ತರ ವಿಭಾಗದ ಕಚೇರಿಗೆ ಸಂಪರ್ಕಿಸುವಂತೆ ಪೊಲೀಸರು ಕೋರಿದ್ದಾರೆ.

SCROLL FOR NEXT