ಕೃಷಿ ಭೂಮಿಯಲ್ಲಿ ಡಿಕೆ.ಶಿವಕುಮಾರ್ ಭತ್ತ ಬೆಳೆದಿದ್ದಾರೆಯೇ ಹೊರತು ಚಿನ್ನವಲ್ಲ: ಜಾರಿ ನಿರ್ದೇಶನಾಲಯ
ನವದೆಹಲಿ: ತೆರಿಗೆ ಕಟ್ಟಿದಾಕ್ಷಣ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ಕಳಂಕಿತ ಆಸ್ತಿಯೇನು ಕಳಂಕ ರಹಿತವಾಗಿ ಮಾರ್ಪಾಡುಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ಮುಂದೆ ಜಾರಿ ನಿರ್ದೇಶನಾಲಯ ಗುರುವಾರ ವಾದ ಮಂಡಿಸಿದೆ.
ಬೇನಾಮಿ ಆಸ್ತಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ ಗುರುವಾರ ಸುಮಾರು ಒಂದು ಮುಕ್ಕಾಲು ಗಂಟೆ ಪ್ರಬಲ ವಾದ ಮಂಡಿಸಿದ ಅಡಿಷನಲ್ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ಜಾರಿ ನಿರ್ದೇಶನಾಲಯವು ಡಿ.ಕೆ.ಶಿವಕಮಾರ್ ಆಸ್ತಿ ಮತ್ತು ಹಣಕಾಲು ಮೂಲ ಪತ್ತೆಯಾಗುತ್ತಿದ್ದು, ಜಾಮೀನು ಅರ್ಜಿ ವಿಚಾರಣಾ ಹಂತದಲ್ಲಿ ನಾವು ಹೇಳುತ್ತಿರುವ ವಿಚಾರಗಳು ಸಮುದ್ರದಲ್ಲಿ ಮುಳುಗಿರುವ ದೊಡ್ಡ ಹಿಮಗಡ್ಡೆಯ ಕಣ್ಣಗೆ ಕಾಣುತ್ತಿರುವ ಭಾಗವನ್ನಷ್ಟೇ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ಮೂಲಕ ಜಾರಿ ನಿರ್ದೇಶನಾಲಯವು ಡಿಕೆಶಿ ಸಾಮ್ರಾಜ್ಯದ ಆಳಕ್ಕಿಳಿದು ಇನ್ನಷ್ಟು ಸ್ಫೋಟಕ ಮಾಹಿತಿ ಬಗೆಯುತ್ತಿದ್ದೇವೆಂಬ ಸುಳಿವನ್ನು ನೀಡಿದ್ದಾರೆ.
ಶಿವಕುಮಾರ್ ಅವರನ್ನು ಬಿಡುಗಡೆ ಮಾಡಿದೆ, ಡಿಕೆಶಿಯವರ ಬೇನಾಮಿ ಆಸ್ತಿ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿರುವ ವ್ಯಕ್ತಿಯ ಮೇಲೆ ಒತ್ತಡ ಹೇರುವ ಸಾಧ್ಯತೆಗಳಿವೆ. ಅಲ್ಲದೆ, ತನಿಖೆ ವೇಳೆ ಶಿವಕುಮಾರ್ ಸಹಕಾರ ನೀಡಿಲ್ಲ. ರೂ.800ಕೋಟಿ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದರೂ ಈ ಬಗ್ಗೆ ಸಮರ್ಥನೆ ನೀಡುವಲ್ಲಿ ವಿಫಲಾಗಿದ್ದಾರೆ. ಪ್ರಸ್ತುತ ಅವರು ಘೋಷಣೆ ಮಾಡಿರುವ ಆಸ್ತಿಯ ಮೊತ್ತ ಸೂಕ್ತವಾಗಿಲ್ಲ. ಇಷ್ಟೊಂದು ಮೊತ್ತದ ಆಸ್ತಿ ಹೇಗೆ ಬಂತು ಎಂಬುದೇ ಪ್ರಶ್ನೆಯಾಗಿ ಉಳಿದಿದೆ. ಇರುವ ಆಸ್ತಿಗೆ ತೆರಿಗೆ ಕಟ್ಟಿದರೂ ಕಳಂಕಿತ ಆಸ್ತಿಯೇನೂ ಕಳಂಕ ರಹಿತವಾಗಿ ಮಾರ್ಪಾಡು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಶಿವಕುಮಾರ್ ಕುಟುಂಬ ಕೃಷಿ ಮೂಲಕ ಹತ್ತು ವರ್ಷಗಳಲ್ಲಿ ರೂ.1.38 ಕೋಟಿ ಸಂಪಾದನೆ ಮಾತ್ರ ಮಾಡಿದೆ. ಸಾಮಾನ್ಯವಾಗಿ ಕೃಷಿ ಚಟುವಟಿಕೆಗಳ ಆದಾಯದ ಅರ್ಧದಷ್ಟು ವೆಚ್ಚವಾಗುತ್ತದೆ. ಆದರೆ, ಶಿವಕುಮಾರ್ ಅವರ ಕೃಷಿ ಆದಾಯವನ್ನು ತೋರಿಸುವ 2 ಬ್ಯಾಂಕ್ ಖಾತೆಗಳಲ್ಲಿ ರೂ.161 ಕೋಟಿ ವ್ಯವಹಾರವಾಗಿದೆ. ಶಿವಕುಮಾರ್ ತಮ್ಮ ಜಮೀನಿನಲ್ಲಿ ಭತ್ತ ಬೆಳೆದಿದ್ದಾರೆಯೇ ಹೊರತು ಬಂಗಾರ ಬೆಳೆದಿಲ್ಲ. 2014ರವರೆಗೆ ಅವರ ಕೃಷಿ ಆದಾಯ ವರ್ಷಕ್ಕೆ ರೂ.3 ಲಕ್ಷ ಇತ್ತು. ಆದರೆ, 2014ರಿಂದ ರೂ.9ಲಕ್ಷಕ್ಕೇರಿದೆ ಎಂದು ಇಡಿ ತನ್ನ ವಾದದಲ್ಲಿ ಆರೋಪಿಸಿದೆ.