ರಾಜ್ಯ

ಮೋದಿಯಂತಹ ಬೇಜವಾಬ್ದಾರಿಯುತ ಪ್ರಧಾನಿಯನ್ನು ದೇಶ ಹಿಂದೆಂದೂ ಕಂಡಿಲ್ಲ: ಜೆಡಿಎಸ್ ಲೇವಡಿ

Shilpa D

ಬೆಂಗಳೂರು: ರಾಜ್ಯದಲ್ಲಿ  ಸಂಭವಿಸಿರುವ ಭೀಕರ ಪ್ರವಾಹಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಜಾತ್ಯಾತೀತ ಜನತಾದಳ(ಜೆಡಿಎಸ್) ಸಾಮಾಜಿಕ ಜಾಲತಾಣದ ಮೂಲಕ ವಾಗ್ಧಾಳಿ ನಡೆಸಿದೆ.

ಈ ಕುರಿತು ತನ್ನ ಟ್ವಿಟ್ಟರ್ ಮೂಲಕ ಕಿಡಿ ಕಾರಿರುವ ಜೆಡಿಎಸ್, ರಾಜ್ಯ ಭೀಕರ ಪ್ರವಾಹಕ್ಕೆ ಸಿಲುಕಿ ತತ್ತರಿಸಿದರೂ ಸಹ ಯಾವುದೇ ಸಹಾಯ ಮಾಡದೆ ನಿರ್ಲಕ್ಷ್ಯ ತೋರಿದ ನರೇಂದ್ರ ಮೋದಿ ಅರಂತಹ ಬೇಜವಾಬ್ದಾರಿ ಪ್ರಧಾನಿಯನ್ನು ದೇಶ ಹಿಂದೆಂದೂ ಕಂಡಿಲ್ಲ ಎಂದು ಛೀಮಾರಿ ಹಾಕಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧವೂ ಅಸಮಾಧಾನ ಹೊರಹಾಕಿರುವ ಜೆಡಿಎಸ್, ಸ್ವಪಕ್ಷದ ಪ್ರಧಾನಿಯನ್ನು ಭೇಟಿಯಾಗಲು ಹೆಣಗಾಡುತ್ತಿರುವ  ಯಡಿಯೂರಪ್ಪ ಅವರಷ್ಟು ದುರ್ಬಲ ಮುಖ್ಯಮಂತ್ರಿಯನ್ನು ರಾಜ್ಯ ಹಿಂದೆಂದೂ ಕಂಡಿಲ್ಲ ಎಂದು ಲೇವಡಿ ಮಾಡಿದೆ.

ಇದಕ್ಕೂ ಮೊದಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅತಿವೃಷ್ಟಿಯಂತಹ ತುರ್ತು ಸ್ಥಿತಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಸಂದರ್ಶನ ನಿರಾಕರಿಸುತ್ತಿರುವುದು ಯಡಿಯೂರಪ್ಪ ಅವರಿಗೆ ಅವಮಾನ ಹಾಗೂ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಎಂದು ಬಣ್ಣಿಸಿದ್ದರು. ಅಲ್ಲದೆ ಸ್ವಾಭಿಮಾನಿ ಕನ್ನಡಿಗರು ಇದನ್ನು ಸಹಿಸರು' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
 

SCROLL FOR NEXT