ರಾಜ್ಯ

6 ತಿಂಗಳಲ್ಲಿ 48 ಮರಗಳನ್ನು ಸ್ಥಳಾಂತರಗೊಳಿಸಿದ 'ಬೆಳಗಾವಿ ಟ್ರೀ ಮ್ಯಾನ್'

Sumana Upadhyaya

ಬೆಳಗಾವಿ; ಪರಿಸರ ಉಳಿಸಿ ಬೆಳೆಸುವ ಕೂಗು ಇತ್ತೀಚೆಗೆ ಜೋರಾಗುತ್ತಿದೆ. ಪರಿಸರ ಸಂರಕ್ಷಣೆಗೆ, ಹಸಿರು ಕಾನನ ಸೃಷ್ಟಿಗೆ ಪ್ರತಿಯೊಬ್ಬ ನಾಗರಿಕರೂ ಸಾಮಾಜಿಕ ಜವಾಬ್ದಾರಿ ಬೆಳೆಸಿಕೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ ಯುವ ಸಮೂಹದ ಪಾತ್ರ ಮುಖ್ಯವಾಗಿದೆ ಎಂದು ಗಣ್ಯರು ಹೇಳುವುದನ್ನು ನಾವು ಆಗಾಗ ಕೇಳುತ್ತೇವೆ. 


ಬೆಳಗಾವಿ ಜಿಲ್ಲೆಯ ಯುವಕ ಪರಿಸರ ಸಂರಕ್ಷಣೆ ಹೋರಾಟಗಾರ ಕಿರಣ್ ನಿಪ್ಪಾಣಿಕರ್ ಮಾಡಿರುವ ಕೆಲಸ ಅನುಕರಣೀಯ.ಯುವಕ-ಯುವತಿಯರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈ ಕೆಲಸವೇ ಸಾಕ್ಷಿ. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಕಡಿದು ನೆಲಸಮವಾಗಬೇಕಿದ್ದ ಮರಗಳನ್ನು ಕಿರಣ್ ಅವರು ಸರ್ಕಾರಿ ಅಧಿಕಾರಿಗಳ ಮನವೊಲಿಸಿ ಬುಡಸಮೇತ ತೆಗೆದು ಸ್ಥಳಾಂತರ ಮಾಡಿ ಇನ್ನೊಂದೆಡೆ ನೆಟ್ಟು ಅಲ್ಲಿ ಬೆಳೆದು ನೆರಳು ಕೊಡುವ ವ್ಯವಸ್ಥೆ ಮಾಡಿದ್ದಾರೆ.
ಕಿರಣ್ ಅವರ ಈ ಕೆಲಸದಿಂದಾಗಿ ಅವರು ಜಿಲ್ಲೆಯ ಟ್ರೀ ಮ್ಯಾನ್ ಎಂದು ಜನರಿಂದ ಕರೆಯಲ್ಪಡುತ್ತಿದ್ದಾರೆ.


ಕಳೆದ 6 ತಿಂಗಳಲ್ಲಿ ಕಿರಣ್ 48 ಮರಗಳನ್ನು ಸ್ಥಳಾಂತರಗೊಳಿಸಿ ಬೇರೆಡೆ ನೆಟ್ಟು ಅಲ್ಲಿ ಚೆನ್ನಾಗಿ ಬೆಳೆಯುತ್ತಿದೆ. ಇವರ ಈ ಕಾಳಜಿಯ ಕೆಲಸಕ್ಕೆ ಲೋಕೋಪಯೋಗಿ ಇಲಾಖೆ, ಕಂಟೋನ್ಮೆಂಟ್ ಬೋರ್ಡ್, ಅರಣ್ಯ ಇಲಾಖೆ ಮತ್ತು ಕೆಲ ದಾನಿಗಳು ಸಹಾಯ ನೀಡಿದರು.


ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಕಿರಣ್ ನಿಪ್ಪಾಣಿಕರ್, ಜಾಗತಿಕ ತಾಪಮಾನ ಗಂಭೀರ ವಿಷಯವಾಗಿದ್ದರೂ ಕೂಡ ಬಹುತೇಕ ಮಂದಿಯ ಮನೋಧರ್ಮ ಇಂದಿಗೂ ಬದಲಾಗಿಲ್ಲ. ಅಭಿವೃದ್ಧಿ ಹೆಸರಿನಲ್ಲಿ, ವಿಲಾಸಿ ಜೀವನ ನಡೆಸಲು ಮರ ಗಿಡಗಳನ್ನು ಕಡಿಯಲಾಗುತ್ತದೆ. ಮರ ಗಿಡಗಳನ್ನು ನಾಶ ಮಾಡದೆಯೂ ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು ಎಂದರು. 

SCROLL FOR NEXT