ಕಡೂರು: ನಿಂತಿದ್ದ ಲಾರಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಬಳಿ ಸಂಭವಿಸಿದ ಅಪಘಾತದಲ್ಲಿ ಶಿವಮೊಗ್ಗ ಮೂಲದ ಶರವಣ (45) ಹಾಗೂ ಕಡೂರು ಸರ್ವೇ ಇಲಾಖೆಯ ಸಿಬ್ಬಂದಿ, ಬೇಲೂರಿನ ಹಗರೆಯ ರುಚಿತ (22) ಮೃತ ಪಟ್ಟಿದ್ದಾರೆ. ಅಲ್ಲದೆ ಹತ್ತಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಡೀಸೆಲ್ ಖಾಲಿಯಾಗಿದ್ದ ಕಾರಣ ಲಾರಿ ಚಾಲಕ ರಸ್ತೆ ಬದಿಯಲ್ಲಿ ಲಾರಿ ನಿಲ್ಲಿಸಿದ್ದ. ಆ ವೇಳೆ ಚಿಕ್ಕಮಗಳೂರಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಲಾರಿಗೆ ಗುದ್ದಿ ಭೀಕರ ದುರಂತ ಸಂಭವಿಸಿದೆ.
ಬಸ್ ನಲ್ಲಿ ಇಪ್ಪತ್ತಕ್ಕೆ ಹೆಚ್ಚು ಪ್ರಯಾಣಿಕರಿದ್ದರೆನ್ನಲಾಗಿದೆ. ಗಂಭೀರ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ
ಸಖರಾಯಪಟ್ಟಣ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.