ಚಿಕ್ಕಮಗಳೂರು: ಸಂಚಾರ ಠಾಣೆ ಎಎಸ್ಐ ಒಬ್ಬರು ದಂಪತಿಯ ಖಾಸಗಿ ದೃಶ್ಯಗಳನ್ನು ವಿಡಿಯೋ ಮಾಡಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿದರೂ, ಪೊಲೀಸ್ ಇಲಾಖೆ ನಡೆದುಕೊಂಡ ರೀತಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಸಂಚಾರಿ ಪೊಲೀಸ್ ಠಾಣೆಯ ಸಹಾಯಕ ಇನ್ಸ್ ಪೆಕ್ಟರ್ ಯತೀಶ್ ಎಂಬುವರು ಜಯನಗರ ಬಡಾವಣೆಯಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರ ಮನೆಯ ಕಿಟಕಿ ಬಳಿ ನಿಂತು ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದನ್ನು ಕೆಲ ಯುವಕರು ಪ್ರಶ್ನಿಸಿದ್ದಕ್ಕೆ ಪೊಲೀಸರು ಬಂಧಿಸಿದ್ದಾರೆ.
ದಂಪತಿ ಮತ್ತು ಸ್ಥಳೀಯರು ಹೇಳುವ ಪ್ರಕಾರ, ಎಎಸ್ಐ ಯತೀಶ್ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದ ಕೆಲವು ವಿಡಿಯೋಗಳನ್ನು ಪೊಲೀಸರು ಡಿಲೀಟ್ ಮಾಡಿದ್ದಾರೆ. ಎಎಸ್ಐ ಯತೀಶ್ ತಪ್ಪು ಮಾಡಿದ್ದರೂ ಆತನ ವಿರುದ್ಧ ಕಾನೂನು ಕ್ರಮ ಜರುಗಿಸದೆ, ಪ್ರಶ್ನಿಸಿದ ಸ್ಥಳೀಯ ಯುವಕರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಲಾಗಿದೆ. ಆದರೆ, ಯಾವ ಕಾರಣಕ್ಕೆ ಯುವಕರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ ಎಂಬುದಾಗಿ ಸ್ಥಳೀಯ ನಿವಾಸಿಗಳು ಆಕ್ಷೇಪವೆತ್ತಿದ್ದಾರೆ.
ವಿನೋದ್, ಸುಧೀರ್, ವಸಂತ್ ಕುಮಾರ್ ಮತ್ತು ಅನಿಲ್ ಎಂಬುವರು ಸಬ್ ಇನ್ಸ್ ಪೆಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ, ಅವರ ವಿರುದ್ದ ಕೊಲೆಯತ್ನ ನಡೆದಿದೆ ಎಂದು ದೂರಿದ್ದಾರೆ, ಸದ್ಯ ಎಸ್ ಐ ಪ್ರಜ್ಞಾ ಹೀನರಾಗಿದ್ದು, ಅವರಿಗೆ ಪ್ರಜ್ಞೆ ಬಂದ ಬಳಿಕ ಹೇಳಿಕೆ ಪಡೆಯುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಯತೀಶ್ ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯತೀಶ್ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಎಸ್ ಪಿ ಹರೀಶ್ ಪಾಂಡೆ ಭರವಸೆ ನೀಡಿದ್ದಾರೆ.