ರಾಜ್ಯ

ಈಗಲೇ ಪಿಪಿಇಗಳ ಕೊರತೆ ಎದುರಾಗಿದೆ, ಕೊರೋನಾ 3ನೇ ಹಂತ ತಲುಪಿದರೆ ಪರಿಸ್ಥಿತಿ ಹೇಗೆ?: ವೈದ್ಯರ ಆತಂಕ

Manjula VN

ಬೆಂಗಳೂರು: ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಕೊರೋನಾ ಪ್ರಕರಣಗಳ ಸುನಾಮಿಯೇ ಏಳಬಹುದು, ಇದರಿಂದ ಆರೋಗ್ಯ ವ್ಯವಸ್ಥೆ ಮೇಲೆ ಗಂಭೀರ ಬೀಳಲಿದ್ದು, ಈಗಾಗಲೇ ವೈಯಕ್ತಿಕ ರಕ್ಷಣಾ ಕವಚಗಳ (ಪಿಪಿಇ) ಕೊರತೆ ಎದುರಾಗಿದೆ ಎಂದ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. 

ಪ್ರಸ್ತುತ ನಮ್ಮಲ್ಲಿ ಕೇವಲ 500 ಪಿಪಿಇಗಳಷ್ಟೇ ಲಭ್ಯವಿದ್ದು, 5,000 ಪಿಪಿಇ ಅಗತ್ಯವಿದೆ. ಈಗಲೇ ರಕ್ಷಣಾ ಕವಚಗಳ ಕೊರತೆ ಎದುರಾಗಿದ್ದು, ವೈರಸ್ ಮೂರನೇ ಹಂತ ತಲುಪಿದ್ದೇ ಆದರೆ, ಮುಂದಿನ ಪರಿಸ್ಥಿತಿ ನಿಭಾಯಿಸುವುದಾದರೂ ಹೇಗೆ ಎಂದು ವೈದ್ಯರು ಪ್ರಶ್ನೆ ಮಾಡುತ್ತಿದ್ದಾರೆ. 

ಪ್ರಸ್ತುತ ವೈರಸ್ ಎರಡನೇ ಹಂತದಲ್ಲಿರುವುದರಿಂದ ಇರುವ ರಕ್ಷಣಾ ಕವಚಗಳನ್ನೇ ಬಳಸಿಕೊಂಡು ನಾವು ಪರಿಸ್ಥಿತಿ ನಿಭಾಯಿಸುತ್ತಿದ್ದೇವೆ. ಆದರೆ, ವೈರಸ್ 3ನೇ ಹಂತ ತಲುಪುವ ದಿನಗಳು ದೂರವಿಲ್ಲ. ಕೂಡಲೇ ಸರ್ಕಾರ ಕ್ರಮ ಕೈಗೊಂಡು ರಕ್ಷಣಾ ಕವಚಗಳನ್ನು ಒದಗಿಸಬೇಕಿದೆ. ಪ್ರಸ್ತುತ ಹಲವು ವೈದ್ಯಕೀಯ ವೃತ್ತಿಪರರು ಅಪಾಯದ ಸ್ಥಿತಿಯಲ್ಲಿದ್ದಾರೆಂದು ಹಿರಿಯ ವೈದ್ಯರೊಬ್ಬರು ಹೇಳಿದ್ದಾರೆ. 100 ಬೆಡ್ ಗಳಿರುವ ಆಸ್ಪತ್ರೆಗೆ 1,000 ಪಿಪಿಇ ಗಳ ಅಗತ್ಯವಿದೆ. ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಸಿಬ್ಬಂದಿಗಳಿಗೆ ವಾರಕ್ಕೆ ಒಂದು ಪಿಪಿಇಗಳನ್ನು ನೀಡಲಾಗುತ್ತಿದ್ದು, ವಾರದ ಕೆಲಸ ಪೂರ್ಣಗೊಂಡ ಬಳಿಕ ಅವರನ್ನು ಕ್ವಾರಂಟೈನ್ ನಲ್ಲಿರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. 

ಈ ಬಗ್ಗ ಸರ್ಕಾರ ಗಮನ ಹರಿಸಬೇಕು. ಪ್ರಕರಣ ಸಂಖ್ಯೆ ಏರಿಕೆಯಾಗಿದ್ದೇ ಆದರೆ, ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದೂ ಕೂಡ ಕಷ್ಟಕರವಾಗಿ ಹೋಗುತ್ತದೆ. ನಮಗೆ ಬೇರೆ ದಾರಿಯಿಲ್ಲ ರೋಸ್ಟರ್ ವ್ಯವಸ್ಥೆ ಅನುಸರಿಸುವುದೇ ಒಳಿತು ಎನಿಸುತ್ತಿದೆ. ಇಲ್ಲದೆ ಹೋದರೆ ವೈದ್ಯಕೀಯ ಸಮುದಾಯದಲ್ಲಿಯೇ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತದೆ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದ್ದಾರೆ. 

ಕೆಸಿ ಜನರಲ್ ಆಸ್ಪತ್ರೆಯ ನರ್ಸ್ ಒಬ್ಬರು ಮಾತನಾಡಿ, ಮನೆಯನ್ನೇ ಸಂಪೂರ್ಣವಾಗಿ ತೊರೆದು ಇದೀಗ ಸಹೋದ್ಯೋಗಿಯೊಬ್ಬರ ರೂಮಿನಲ್ಲಿದ್ದೇನೆ. ನನ್ನ ಪತಿ ಹಾಗೂ 6 ವರ್ಷದ ಮಗಳಿಗೆ ಸೋಂಕು ತಗುಲುವುದನ್ನು ತಪ್ಪಿಸಲು ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಕಾರ್ಯನಿರ್ವಹಿಸಿದ ಬಳಿಕ 14 ದಿನ ಕ್ವಾರಂಟೈನ್ ನಲ್ಲಿರಬೇಕಾಗಿದೆ. ನನ್ನ ಕುಟುಂಬಕ್ಕೆ ಸಮಸ್ಯೆ ನೀಡುವುದು ನನಗಿಷ್ಟವಿಲ್ಲ ಎಂದಿದ್ದಾರೆ. 

ಖಾಸಗಿ ಸಿಬ್ಬಂದಿಗಳನ್ನು ಕಾರ್ಯ ನಿಯೋಜಿಸುವ ಯತ್ನ ನಡೆಸಲಾಗುತ್ತಿದೆ. ಆದರೆ, ಲಾಕ್ ಡೌನ್ ಹಿನ್ನೆಲೆಯಲ್ಲಿ ಬಹುತೇಕ ಖಾಸಗಿ ಆಸ್ಪತ್ರೆಗಳು ಸಿಬ್ಬಂದಿಗಳು ಮನೆಗಳಿಗೆ ಕಳುಹಿಸಿದ್ದಾರೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. 

SCROLL FOR NEXT