ರಾಜ್ಯ

ರಸಗೊಬ್ಬರ, ಔಷಧೋದ್ಯಮಗಳಿಂದ 136 ಕೋಟಿ ರೂ. ದೇಣಿಗೆ: ಡಿವಿ ಸದಾನಂದ ಗೌಡ

Vishwanath S

ಬೆಂಗಳೂರು: ಮಾರಕ ಕೊರೋನಾ ಸೋಂಕಿನ ಪರಿಹಾರ ಕಾರ್ಯಕ್ಕಾಗಿ ಪ್ರಧಾನಮಂತ್ರಿ ಪ್ರಧಾನಿ ತುರ್ತು ಪರಿಹಾರ ನಿಧಿಗೆ ಔಷಧೋದ್ಯಮಗಳು, ರಾಸಾಯನಿಕ ಹಾಗೂ ರಸಗೊಬ್ಬರ ಕಂಪನಿಗಳು ಉದಾರವಾಗಿ ದೇಣಿಗೆ ನೀಡಿದ್ದು, ಈವರೆಗೆ 136.52 ಕೋಟಿ ರೂಪಾಯಿ ನೆರವು ಸಂಗ್ರಹವಾಗಿದೆ.

ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯಡಿ ಬರುವ ಹಲವು ಸಾರ್ವಜನಿಕ ಉದ್ದಿಮೆಗಳ ನೌಕರರೂ ಒಂದು ದಿನದ ಸಂಬಳ ನೀಡಿದ್ದಾರೆ. ಸಚಿವ ಡಿ.ವಿ. ಸದಾನಂದಗೌಡ ಈ ಕುರಿತು ಮಾಹಿತಿ ನೀಡಿದ್ದಾರೆ. ಪ್ರಧಾನಿ ಸೂಚನೆ ಮೇರೆಗೆ ಕಳೆದೆರಡು ವಾರಗಳಿಂದ ದೆಹಲಿಯಲ್ಲಿ ತಾವು ಉಳಿದುಕೊಂಡಿದ್ದು, ದೇಶದಲ್ಲಿ ರಸಗೊಬ್ಬರ ಹಾಗೂ ಜನೌ಼ಷಧ ಲಭ್ಯತೆ, ಸರಬರಾಜು ಸುಸೂತ್ರವಾಗಿರುವಂತೆ ನೋಡಿಕೊಳ್ಳುತ್ತಿರುವುದಾಗಿ ತಿಳಿಸಿದ್ಧಾರೆ.

ಹಾಗೆಯೇ ಅವರಿಗೆ ಕೊರೋನಾಕ್ಕೆ ಸಂಬಂಧಿಸಿದಂತೆ ಕೇರಳ ಮತ್ತು ಲಕ್ಷದ್ವೀಪದ ಸಂಯೋಜನಾ ಜವಾಬ್ಧಾರಿಯನ್ನೂ ಸಹ ಸಮರ್ಪಕವಾಗಿ ನಿಭಾಯಿಸುತ್ತಿರುವುದಾಗಿ ತಿಳಿಸಿದ್ದಾರೆ. ತಾವು ಪ್ರತಿನಿಧಿಸುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೊರೋನಾ ಸಂಬಂಧಿತ ಪರಿಹಾರ ಕಾರ್ಯಗಳು ಭರದಿಂದ ನಡೆದಿವೆ. ತಾವು ಪ್ರತಿನಿತ್ಯವೂ ಕ್ಷೇತ್ರದ ಸಚಿವರು, ಶಾಸಕರು, ಜಿಲ್ಲಾಧ್ಯಕ್ಷರು, ಮಂಡಳಿ ಅಧ್ಯಕ್ಷರು ಹಾಗೂ ಪ್ರಮುಖ ನಾಯಕರ ಜೊತೆ ದೂರವಾಣಿಯಲ್ಲಿ ಮಾತನಾಡಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡುತ್ತಿರುವುದಾಗಿಯೂ ತಿಳಿಸಿದ್ದಾರೆ.

ಪ್ರತಿ ದಿನ ಒಂದು ಲಕ್ಷಕ್ಕಿಂತ ಹೆಚ್ಚುಬಡವರು, ದಿನಗೂಲಿಗಳು, ಲಾಕ್ ಡೌನ್ ನಿಂದ ತೊಂದರೆಗೊಳಗಾದ ವಲಸಿಗರಿಗೆ ಊಟ ನೀಡಲಾಗುತ್ತಿದೆ. ಕಳೆದ ಮೂರು ದಿನಗಳಲ್ಲಿ 1.5 ಲಕ್ಷ ಕುಟುಂಬಗಳಿಗೆ ಆಹಾರ ದಿನಸಿ ಸೇರಿದಂತೆ ಜೀವನಾವಶ್ಯಕ ವಸ್ತುಗಳನ್ನು ವಿತರಿಸಲಾಗಿದೆ. ಎಲ್ಲ 8 ವಿಧಾನ ಸಭಾಕ್ಷೇತ್ರಗಳು, ವಾರ್ಡ್ ಗಳು, ಪಕ್ಷದ ಮಂಡಳಿ ಹಾಗೂ ಶಕ್ತಿ ಕೇಂದ್ರದ ಹಂತದದಲ್ಲಿ ಕಾರ್ಯದಳಗಳನ್ನು ರಚಿಸಿ ಪರಿಹಾರ ಕೈಗೊಳ್ಳಲಾಗಿದೆ. ಪ್ರತಿ ವಾರ್ಡಿನಲ್ಲಿಯೂ ಸಹಾಯವಾಣಿ ಸ್ಥಾಪಿಸಲಾಗಿದ್ದು ಅಗತ್ಯ ಇರುವವರಿಗೆ ಆಹಾರ, ಔಷಧಿ ಮತ್ತಿತರ ಸಾಮಗ್ರಿಗಳನ್ನು ನಮ್ಮ ಕಾರ್ಯಕರ್ತರು ಪೂರೈಸುತ್ತಿದ್ದಾರೆ ಎಂದು ಸದಾನಂದಗೌಡ ಹೇಳಿದ್ದಾರೆ.

SCROLL FOR NEXT