ರಾಜ್ಯ

ಬಡವರ ಜೀವ ಉಳಿಸಲು ಬಂದಿದೆ ಕಡಿಮೆ ವೆಚ್ಚದ 'ಜೀವ ರಕ್ಷಕ' ವೆಂಟಿಲೇಟರ್

Manjula VN

ಬೆಂಗಳೂರು: ದೇಶದಾದ್ಯಂತ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುಲ್ಲೇ ಇದ್ದು, ವೈರಸ್ ಪೀಡಿತರಿಗೆ ಜೀವರಕ್ಷಕವಾಗಿರುವ ವೆಂಟಿಲೇಟರ್ ಗಳಿಗೆ ಬೇಡಿಕೆಗಳು ಹೆಚ್ಚಾಗಿವೆ. ಆದರೆ, ದುಬಾರಿಯಾಗಿರುವ ಈ ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುವುದು ಬಡವರಿಗೆ ಕಷ್ಟವಾಗುತ್ತಿದ್ದು, ಬಡವರಿಗೆ ಕೈಗೆಟುಕುವ ದರದಲ್ಲಿ ವೆಂಟಿಲೇಟರ್ ಗಳನ್ನು ರೈಲ್ವೇ ಸಿಬ್ಬಂದಿಗಳು ಸಿದ್ಧಪಡಿಸಿದ್ದಾರೆ. 

ಯಲಹಂಕದಲ್ಲಿರುವ ರೈಲ್ ವೀಲ್ ಫ್ಯಾಕ್ಟರಿ (ಆರ್'ಡಬ್ಲ್ಯೂಎಫ್) ಕಡಿಮೆ ವೆಚ್ಚದ ವೆಂಟಿಲೇಟರ್ ಗಳನ್ನು ಸಿದ್ಧಪಡಿಸಿದ್ದು, ಇದು ಬಡವರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. 

ಆರ್'ಡಬ್ಲ್ಯೂಎಫ್ ತಾಂತ್ರಿಕ ತಂಡ ಉಬ್ರಿಕಮ್ ಎಂಬ ಕಂಪನಿಯ ವಸ್ತುಗಳನ್ನು ಬಳಸಿಕೊಂಡು  ವೆಂಟಿಲೇಟರ್'ನ್ನು ವಿನ್ಯಾಸಗೊಳಿಸಿದೆ. 

ಜಯನಗರದಲ್ಲಿರುವ 3ಡಿ ಪ್ರಿಂಟಿಂಗ್ ಔಟ್'ಲೆಟ್ ನಲ್ಲಿ ನಮಗೆ ಅಗತ್ಯವಿದ್ದ ಅರ್ಧದಷ್ಟು ವಸ್ತುಗಳು ದೊರಕಿದ್ದವು. ಬಳಿಕ ನಮ್ಮ ತಾಂತ್ರಿಕ ತಂಡದ ಸಿಬ್ಬಂದಿಗಳು ವೆಂಟಿಲೇಟರ್ನ್ನು ಸಿದ್ಧಪಡಿಸಿದರು. ವೆಂಟಿಲೇಟರ್ ತಯಾರಿಸಲು ರೂ.15,000 ವೆಚ್ಚವಾಯಿತು. ಪ್ರಸ್ತುತ ಇದು ಪ್ರಾಥಮಿಕ ಹಂತದಲ್ಲಿದೆ. ಬಯೋಮೆಕಾನಿಕಲ್ ಇಂಜಿನಿಯರ್ಸ್ ಹಾಗೂ ವೈದ್ಯರ ಸಹಾಯಕ್ಕಾಗಿ ನಿರೀಕ್ಷಿಸುತ್ತಿದ್ದೇವೆ. ಈ ವೆಂಟಿಲೇಟರ್ ಆಮ್ಲಜನಿಕ ಆಧಾರಿತವಾಗಿಲ್ಲ. ಆದರೆ, ವಾತಾವರಣದ ಗಾಳಿಯನ್ನು ಬಳಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ. 

ವೈರಸ್ ಹೆಚ್ಚಾಗುತ್ತಿರುವ ಪರಿಣಾಮ ಇಂತಹ ಪರಿಸ್ಥಿತಿಯಲ್ಲಿ ನಮ್ಮಿಂದ ಏನಾದರೂ ಸಹಾಯವಾಗಬಹುದೆಂದು ನಾವು ಇಂತಹ ಪ್ರಯತ್ನ ಮಾಡಿದ್ದೇವೆ. ಸಾಕಷ್ಟು ಕೆಲಸದ ಒತ್ತಡದ ನಡುವೆಯೂ ಐವರು ಸಿಬ್ಬಂದಿಗಳು ಸೇರಿ ಈ ವೆಂಟಿಲೇಟರ್'ನ್ನು ಸಿದ್ಧಪಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡುತ್ತೇವೆಂದು ತಿಳಿಸಿದ್ದಾರೆ. 

ವಿಕ್ರಮ್ ಆಸ್ಪತ್ರೆಯ ವೈದ್ಯ ಡಾ.ಕೆ.ಎನ್. ಮಂಜುನಾಥ್ ಅವರು ಮಾತನಾಡಿ, ಪೂರ್ಣಪ್ರಮಾಣದ ವೆಂಟಿಲೇಟರ್ ಗಳಿಗೆ ರೂ.6 ಲಕ್ಷದಿಂದ 7 ಲಕ್ಷದವರೆಗೂ ವೆಚ್ಚವಾಗುತ್ತದೆ. ಕಡಿಮೆ ವೆಚ್ಚದ ಈ ವೆಂಟಿಲೇಟರ್ ಬಳಕೆಗೂ ಮುನ್ನ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಲಿ ಇದಕ್ಕೆ ಒಪ್ಪಿಗೆ ನೀಡಬೇಕಿದೆ. ಇದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ. 

SCROLL FOR NEXT