ರಾಜ್ಯ

ಸೀಜ್ ಆದ ಆಟೋ ಪಾರ್ಕಿಂಗ್ ವೇಳೆ ಅವಘಡ: ಪೇದೆಗೆ ಗಂಭೀರ ಗಾಯ; ಗೃಹ ಸಚಿವರಿಂದ ಆರೋಗ್ಯ ವಿಚಾರಣೆ

Shilpa D

ಬೆಂಗಳೂರು: ಕರ್ತವ್ಯ ನಿರತನಾಗಿದ್ದ ವೇಳೆ ಪೊಲೀಸರೊಬ್ಬರು ಅಪಘಾತಕ್ಕೀಡಾಗಿ ಜೀವನ್ಮರಣ ಹೋರಾಟದಲ್ಲಿದ್ದಾರೆ. 

ಸೀಜ್ ಆದ ಆಟೋವನ್ನು ಪೊಲೀಸ್ ಠಾಣೆ ಬಳಿ ನಿಲ್ಲಿಸಲು ತೆಗೆದುಕೊಂಡು ಹೋಗುವಾಗ ವಾಹನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಹೆಡ್​ ಕಾನ್ಸ್​ಟೆಬಲ್ ನಾಗೇಶ್ ಅವರ ತಲೆಗೆ ಗಂಭೀರ ಗಾಯವಾಗಿದೆ.

ಸದ್ಯ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೀಣ್ಯದ ಬಳಿ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನ ತಡೆಯುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದರು. ಈ ವೇಳೆ, ಆಟೋವನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಸೀಜ್ ಆದ ಆಟೋವನ್ನು ಪೀಣ್ಯ ಠಾಣೆ ಸಮೀಪದ ಮಂಜುನಾಥ ನಗರದಲ್ಲಿ ನಿಲ್ಲಿಸಲು ನಾಗೇಶ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಈ ವೇಳೆ, ಆಟೋ ಮಗುಚಿ ಬಿದ್ದಿತೆನ್ನಲಾಗಿದೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಆಸ್ಪತ್ರೆಗೆ ಭೇಟಿ ನೀಡಿ ನಾಗೇಶ್ ಅವರಿಗೆ ಧೈರ್ಯ ಹೇಳಿದ್ದಾರೆ. ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಪೊಲೀಸರನ್ನು ಸಚಿವರು ಶ್ಲಾಘಿಸಿದ್ದಾರೆ. ಕರ್ತವ್ಯದ ವೇಳೆ ಅಪಘಾತವಾದಾಗ ಪೊಲೀಸರಿಗೆ ಎಲ್ಲಾ ರೀತಿಯ ನೆರವು ನೀಡಲಾಗುತ್ತದೆ. ನಾಗೇಶ್ ಅವರಿಗೆ ಬರಬೇಕಾದ ವಿಮೆ ಮತ್ತು ಭತ್ಯೆ ದೊರೆಯುತ್ತದೆ ಎಂದು ಬೊಮ್ಮಾಯಿ ಭರವಸೆ ನೀಡಿದ್ಧಾರೆ.

SCROLL FOR NEXT