ರಾಜ್ಯ

ರಾಜ್ಯದಲ್ಲಿ ಲಾಕ್ ಡೌನ್ ಸಡಿಲ: ಶೇ.33 ರಷ್ಟು ಐಟಿ-ಬಿಟಿ ಸಿಬ್ಬಂದಿಗೆ, ದ್ವಿಚಕ್ರ ವಾಹನ ಓಡಾಟಕ್ಕೆ ಅವಕಾಶ

Lingaraj Badiger

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ವಿಧಿಸಲಾಗಿರುವ ಲಾಕ್ ಡೌನ್ ಅನ್ನು ರಾಜ್ಯದಲ್ಲಿ ಸ್ವಲ್ಪ ಸಡಿಲ ಮಾಡಲಾಗಿದ್ದು, ಏಪ್ರಿಲ್ 20ರ ನಂತರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ(ಐಟಿ, ಬಿಟಿ) ಶೇ. 33ರಷ್ಟು ಸಿಬ್ಬಂದಿ ಕಚೇರಿಗೆ ಹೋಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.

ಈ ಸಂಬಂಧ ಇಂದು ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಮೊನ್ನೆ 36, ನಿನ್ನೆ 44 ಕೊವಿಡ್ ಪ್ರಕಣಗಳು ವರದಿಯಾಗಿದ್ದವು. ಆದರೆ ಇಂದು 12 ಪ್ರಕರಣಗಳು ಮಾತ್ರ ವರದಿಯಾಗಿದ್ದು, ಸಮಾಧಾನಕರ ವಿಚಾರ ಎಂದರು.

ನಗರದಲ್ಲಿ ಕಂಟೇನ್ ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಏಪ್ರಿಲ್ 20ರ ನಂತರ ಐಟಿ, ಬಿಟಿ ಕಂಪನಿಯ ಶೇ. 33ರಷ್ಟು ನೌಕರರು ಕಚೇಯಿಂದ ಕೆಲಸ ಮಾಡಬಹುದು. ಕಚೇರಿಗೆ ತೆರಳು ಪೊಲೀಸರಿಂದ ಪಾಸ್ ಪಡೆಯುವ ಅಗತ್ಯ ಇಲ್ಲ. ಕಟ್ಟಡ ಕಾಮಗಾರಿ ಮುಂದುವರೆಸಬಹುದು ಎಂದರು.

ರಾಜ್ಯದಲ್ಲಿ ಮೇ 3ರ ವರೆಗೆ ನಿಷೇಧಾಜ್ಞೆ ಮುಂದುವರೆಯಲಿದೆ. ಅಂತರ್ ಜಿಲ್ಲಾ ಪ್ರಯಾಣ ನಿಷೇಧಿಸಲಾಗಿದೆ. ಆದರೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳನ್ನು ಒಂದೇ ಜಿಲ್ಲೆ ಎಂದು ಪರಿಗಣಿಸಿ, ಮೂರು ಜಿಲ್ಲೆಗಳಲ್ಲಿ ಜನರ ಓಡಾಟಕ್ಕೆ ಅವಕಾಶ ನೀಡಲಾಗಿದೆ ಎಂದರು.

ಇದೇ ವೇಳೆ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಕುರಿತು ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ ಮೇ 3ರ ನಂತರವೇ ಆ ಬಗ್ಗೆ ನಿರ್ಧರಿಸಲಾಗುವುದು ಎಂದರು.

SCROLL FOR NEXT