ರಾಜ್ಯ

ಬೆಂಗಳೂರು: ರೌಡಿಶೀಟರ್ ಹತ್ಯೆ ಪ್ರಕರಣ, ಇಬ್ಬರ ಬಂಧನ

Raghavendra Adiga

ಬೆಂಗಳೂರು: ಹಣಕ್ಕಾಗಿ ರೌಡಿಶೀಟರ್ ಓರ್ವನನ್ನು ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ರಾಜನಕುಂಟೆಯ ಲೋಕೇಶ್‍ರೆಡ್ಡಿ ಅಲಿಯಾಸ್ ಅವೀರ್(39) ಮತ್ತು ಯಲಹಂಕದ ಸಿಂಗನಾಯಕನಹಳ್ಳಿಯ ನಿಖಿಲ್(25) ಬಂಧಿತ ಆರೋಪಿಗಳು.

ಕಳೆದ ಏ.21ರಂದು ಮಧ್ಯಾಹ್ನ ರೌಡಿ ಪ್ರಕಾಶ್ ಅಲಿಯಾಸ್ ಕ್ವಾಟೆ(34) ಎಂಬಾತನನ್ನು ಸುರದೇನಪುರದಿಂದ ಸಿಲ್ವರ್ ಕಾರಿನಲ್ಲಿ ಅಪಹರಿಸಿದ ದುಷ್ಕರ್ಮಿಗಳು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಶವವನ್ನು ಮತ್ಕೂರು ಗ್ರಾಮದ ಬಳಿ ಬಿಸಾಡಿ ಪರಾರಿಯಾಗಿದ್ದರು. 

ಈ ಸಂಬಂಧ ಮೃತನ ಪತ್ನಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಸೋಲದೇನವಹಳ್ಳಿ ಪೊಲೀಸರು ಖಚಿತವಾದ ಮಾಹಿತಿ ಆಧರಿಸಿ ಇಬ್ಬರನ್ನು ಬಂಧಿಸಿದ್ದಾರೆ. 

ಆರೋಪಿಗಳು ವಿಚಾರಣೆಯಲ್ಲಿ, ಮೃತ ಪ್ರಕಾಶ ರಾಜಾನುಕುಂಟೆ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದು, ಈತನು ಇಸ್ಪೀಟ್ ಆಟದಲ್ಲಿ ಮೋಸ ಮಾಡುವುದು, ಕುಡಿಯುವುದಕ್ಕೆ ಮದ್ಯ ಕೊಡಿಸುವುದಿಲ್ಲವೆಂದು ತಮಗೆ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದನು. ಅದಕ್ಕಾಗಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಶ್ರೇಯಸ್‍ನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. 

ಯಶವಂತಪುರ ಉಪವಿಭಾಗದ ಎಸಿಪಿ, ಎನ್.ಟಿ.ಶ್ರೀನಿವಾಸ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಸೋಲದೇವನಹಳ್ಳಿ ಠಾಣೆಯ ಪೊಲೀಸ್ ಇನ್‍ಸ್ಪೆಕ್ಟರ್ ಸಿ.ಬಿ.ಶಿವಸ್ವಾಮಿ ಹಾಗೂ ಸಿಬ್ಬಂದಿಯವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

SCROLL FOR NEXT