ರಾಜ್ಯ

ಕಾಂಗ್ರೆಸ್ ಕಾರ್ಯಕರ್ತೆ ಮೇಲೆ ಅಶ್ಲೀಲ ಕಮೆಂಟ್ ದಾಳಿ: ಬಿಜೆಪಿಯದ್ದು ತುಘಲಕ್ ದರ್ಬಾರ್ - ತಂಗಡಗಿ

Vishwanath S

ಕೊಪ್ಪಳ: ಬಿಜೆಪಿ  ಸರ್ಕಾರದ ಒಂದು ವರ್ಷದ ಸಾಧನೆಗಳೇನು?' ಎಂಬ ನನ್ನ ಒಂದೇ ಒಂದು ಫೇಸ್ ಬುಕ್ ಪೋಸ್ಟ್ ಗೆ ನನ್ನ ಮೇಲೆ ಅಶ್ಲೀಲ ಕಮೆಂಟ್‌ಗಳ ದಾಳಿ ಆರಂಭಿಸಿದ್ದಾರೆ. ಇದರ ಹಿಂದೆ ಬಿಜೆಪಿ ಮತ್ತು ಆರ್ ಎಸ್ಎಸ್ ಕೈವಾಡವಿದೆ ಎಂದು ಗಂಗಾವತಿಯ ಕಾಂಗ್ರೆಸ್ ಕಾರ್ಯಕರ್ತೆ ಶೈಲಜಾ ಹಿರೇಮಠ ಆರೋಪಿಸಿದರು.

ಕೊಪ್ಪಳದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಮತ್ತು ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ ಜೊತೆ ರವಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಳೆದ‌ ಜುಲೈ 31 ರಂದು ನಾನು ನನ್ನ ಪೇಜ್ ನಲ್ಲಿ 'ರಾಜ್ಯ ಬಿಜೆಪಿ ಒಂದು ವರ್ಷದ ಸಾಧನೆ ಏನು? ಒಬ್ಬರಿಗೆ ಒಂದೇ ಉತ್ತರದ ಅವಕಾಶ' ಎಂದು ಮಾಡಿದ ಪೋಸ್ಟ್ ಗೆ ಕಮೆಂಟ್ ಮಾಡಲಾಗಿದೆ. ಮಹಿಳೆಯರು ಕಿವಿಯಿಂದ ಕೇಳಲು ಹಾಗೂ ಯಾರಿಗೂ ಹೇಳಲು ಆಗದ ಕೆಟ್ಟ ಪದ ಬಳಕ ಮಾಡಿ ಕಮೆಂಟ್ ಮಾಡಿದ್ದಾರೆ. ಇವರಿಗೆಲ್ಲ ಅಕ್ಕ- ತಂಗಿ,‌ ತಾಯಿ ಇದ್ದಾರೋ ಇಲ್ಲ ಎಂಬ ಅನುಮಾನ ಬರ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂಥ ಹತ್ತಾರು ಸಮಸ್ಯೆ ಎದುರಿಸಿಕೊಂಡು ಬೆಳೆದ ನಾನೇ ಸಾಕಷ್ಟು ನೋವು ಉಂಡಿದ್ದೇನೆ. ಈ ಕಮೆಂಟ್ ನೋಡಿ ನನಗೂ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ನೋವಾಗಿತ್ತು ಎಂದು ಭಾವುಕರಾಗಿ ಮಾತನಾಡಿದರು.

ಇವರ ಫೇಸ್ ಬುಕ್ ಪೇಜ್ ನೋಡಿದರೆ ಇವರೆಲ್ಲ ಬಿಜೆಪಿ ಮತ್ತು ಆರ್‌ಎಸ್ಎಸ್ ನವರು ಎಂಬುದು ಗೊತ್ತಾಗುತ್ತದೆ. ತೀರಾ ಅಶ್ಲೀಲವಾಗಿ, ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ 7 ಜನ ಸೇರಿದಂತೆ ಇತರರ ಮೇಲೆ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.

ಈಗಾಗಲೇ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಭೀಮನಗೌಡ ಬಿರಾದಾರ, ಜಯರಾಮ ಶ್ರೀನಿವಾಸ, ಯುವರಾಜ ರೆಡ್ಡಿ ಸೇರಿ 7 ಜನರ ವಿರುದ್ಧ ಎಪ್ಐಆರ್ ದಾಖಲು ಮಾಡಿದ್ದೇನೆ. ರಾಜ್ಯ ಸರ್ಕಾರ ಈ ಎಲ್ಲ ಕಿಡಿಗೇಡಿಗಳ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇವರೆಲ್ಲ ಬಿಜೆಪಿ ಕುಮ್ಮಕ್ಕಿನಿಂದ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು. 

ಸಂವಿಧಾನ ನೀಡಿದ ವಾಕ್ ಸ್ವಾತಂತ್ರ್ಯದಡಿ ಸಭ್ಯ ಭಾಷೆಯಲ್ಲಿ ತಮ್ಮ ಅಭಿಪ್ರಾಯ ತಿಳಿಸುವ ಮಹಿಳೆಯರಿಗೆ ಅವಾಚ್ಚ‌ ಶಬ್ದ ಬಳಿಸಿ ಅಟ್ಯಾಕ್ ಮಾಡುತ್ತಿದ್ದಾರೆ. ಯಾರೂ ಪ್ರಶ್ನೆ ಮಾಡಬಾರದು ಎಂಬುದಕ್ಕೆ ದೇಶದಲ್ಲಿರೋದು ಸದ್ದಾಂ ಹುಸೇನ್, ಹಿಟ್ಲರ್ ಆಡಳಿತ ಅಲ್ಲ. ಬಿಜೆಪಿಯವರು ರಾಮಭಕ್ತರು, ಸಂಸ್ಕಾರವಂತರು ಎಂದು ಹೇಳುತ್ತಾರೆ. ಆದರೆ, ಸಾರ್ವಜನಿಕವಾಗಿ ಬಳಸದ ಕಮೆಂಟ್ ಮಾಡುತ್ತಾರೆ.‌ ಈಗಾಗಲೇ ಎಫ್ಐಆರ್ ದಾಖಲಾಗಿದೆ, ಒಂದು ವಾರ ಗಡುವು ನೀಡಿದ್ದೇವೆ. ಪೊಲೀಸರು ಪತ್ತೆ ಮಾಡಬೇಕು.‌ ಇಲ್ಲವಾದರೆ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ  ಶಿವರಾಜ ತಂಗಡಗಿ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ, ಬಿಜೆಪಿ ವಿರುದ್ಧ ಯಾರಾದರೂ ಸಾಮಾಜಿಕ ಜಾಲತಾಣದಲ್ಲಿ ಬರೆದರೆ ಅಂಥವರನ್ನು ಹತ್ತು ನಿಮಿಷದಲ್ಲಿ‌ ಹಿಡಿದು ತರುವ ಪೊಲೀಸರಿಗೆ ಈ ಪ್ರಕರಣದ ಆರೋಪಿಗಳನ್ನು ಬಂಧಿಸಲು ವಾರದ ಕಾಲಾವಕಾಶ ನೀಡುತ್ತೇವೆ. ಅಷ್ಟರೊಳಗೆ ಬಂಧಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು. ರಾಜ್ಯದಲ್ಲಿ ಬಿಜೆಪಿಯದ್ದು ತುಘಲಕ್ ದರ್ಬಾರ್. ಬೇಕಾದವರಿಗೆ ಒಂದು, ಬೇಡವಾದವರಿಗೆ ಮತ್ತೊಂದು ಎಂದು ತಂಗಡಗಿ ಹರಿಹಾಯ್ದರು.

ವರದಿ: ಬಸವರಾಜ ಕರುಗಲ್

SCROLL FOR NEXT