ರಾಜ್ಯ

ಡಿ.ಜೆ. ಹಳ್ಳಿ ಗಲಭೆ ಮತ್ತೊಬ್ಬ ಆರೋಪಿ ಸೆರೆ; ಮುಂದುವರಿದ ತನಿಖೆ

Srinivasamurthy VN

ಬೆಂಗಳೂರು: ಡಿ.ಜೆ. ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರು ಮತ್ತೊಬ್ಬ ಪ್ರಮುಖ ಆರೋಪಿಯನ್ನು ಗುರುವಾರ ಬಂಧಿಸಿದ್ದಾರೆ.

ಡಿ.ಜೆ ಹಳ್ಳಿ ರೋಷನ್ ನಗರದ ನಿವಾಸಿ ಖಲೀದ್ ಬಂಧಿತ ಆರೋಪಿ. ಗಲಭೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ. ಮುಜಮ್ಮಿಲ್, ಆಯಾಜ್, ಆಫ್ನಾನ್ ಜೊತೆಗೂಡಿ ಜನರನ್ನು ಒಗ್ಗೂಡಿಸಿ ಗಲಭೆಗೆ ಮುಂದಾಗಿದ್ದ ಎಂಬ ಮಾಹಿತಿಯ ಮೇರೆಗೆ ಖಲಿದ್‌ ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮಧ್ಯೆ, ನಗರದಲ್ಲಿ ಬಂಧಿತ ಶಂಕಿತ ಉಗ್ರ ಡಾ.ಅಬ್ದುಲ್ ರೆಹಮಾನ್‌‌ನ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ದಳ-ಎನ್‌ಐಎ ಅಧಿಕಾರಿಗಳು ತೀವ್ರ ಗೊಳಿಸಿದ್ದಾರೆ. ಆರೋಪಿ ಹಾಗೂ ಆತನ ಸ್ನೇಹಿತರು ಬಸವನಗುಡಿ ಫ್ಲಾಟ್​​ನಲ್ಲಿ ಅಪ್ಲಿಕೇಶನ್ ಡೆವಲಪ್ ಮಾಡುವ ಹಾಗೂ ಕೋಡಿಂಗ್ ಕೆಲಸ ಮಾಡುತ್ತಿದ್ದ  ಎನ್ನಲಾಗಿದೆ. ಆರೋಪಿಯಿಂದ ವಶಪಡಿಸಿಕೊಂಡಿರುವ ಮೊಬೈಲ್, ಕೆಮಿಕಲ್, ಲ್ಯಾಪ್ ಟಾಪ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಜನರ ರೊಚ್ಚಿಗೆಬ್ಬಿಸಿದ್ದ ಖತರ್ನಾಕ್ ಆರೋಪಿ ಮಕ್ಬುಲ್‌
ಇದೇ ವೇಳೆ ಇದೇ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆ ದಿನ ಜನರನ್ನು ರೊಚ್ಚಿಗೆಬ್ಬಿಸಿದ್ದ ಖತರ್ನಾಕ್ ಆರೋಪಿ ಮಕ್ಬುಲ್‌ನನ್ನು ಕೂಡ ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗಲಭೆಯ ದಿನ ಮಕ್ಬುಲ್‌ ಬಲವಂತವಾಗಿ ಡಿಜೆ ಹಳ್ಳಿಯ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಿದ್ದ. ಅಂಗಡಿ ಕ್ಲೋಸ್  ಮಾಡದವರಿಗೆ ಧಮ್ಕಿ ಹಾಕಿ ಅಂಗಡಿ ಶೆಟರ್ ಕ್ಲೋಸ್ ಮಾಡಿಸಿದ್ದ. ನಂತರ ಕಿಡಿಗೇಡಿಗಳ ಜೊತೆ ಸೇರಿ ಗಲಭೆ, ದೊಂಬಿ‌ ಎಬ್ಬಿಸಿದ್ದ ಎನ್ನಲಾಗಿದೆ. ಗಲಭೆ ನಂತರದ ವಿಚಾರಣೆಯಲ್ಲಿ ಈತನ ಬಗ್ಗೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.

SCROLL FOR NEXT