ಉಡುಪಿ: ಕೊರೋನಾ ಸೋಂಕಿನ ಹೆಸರಿನಲ್ಲಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಎಡವಟ್ಟುಗಳು ಮುಂದುವರಿದಿವೆ.
ಇದೀಗ ಉಡುಪಿ ಜಿಲ್ಲೆಯ ಕುಂದಾಪುರ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿನ ವ್ಯಕ್ತಿಯ ಮೃತದೇಹವನ್ನು ಅದಲು ಬದಲು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಪಾರ್ಥಿವ ಶರೀರ ಕೊಂಡೊಯ್ದು ಸಂತ್ರಸ್ತ ಕುಟುಂಬದ ಅಂತಿಮ ದರ್ಶನಕ್ಕೆ ಇಟ್ಟಾಗ ಮೃತದೇಹ ನೋಡಿ ಅವರು ಹೌಹಾರಿದ್ದಾರೆ.
ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ನೇರಂಬಳ್ಳಿ ಗ್ರಾಮದ 60 ವರ್ಷದ ಗಂಗಾಧರ್ ಆಚಾರ್ಯ ಎಂಬುವರು ಬೆನ್ನು ನೋವಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಜು.30ರಂದು ಕೊರೋನ ಪಾಸಿಟಿವ್ ದೃಢಪಟ್ಟಿತ್ತು. ಇದರಿಂದ ಆ ವ್ಯಕ್ತಿಯನ್ನು ಉಡುಪಿಯ ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ ವ್ಯಕ್ತಿ ಇಂದು ಬೆಳಗ್ಗೆ ಮೃತಪಟ್ಟಿದ್ದರು.
ಗಂಗಾಧರ್ ಆಚಾರ್ಯ ಕುಟುಂಬಕ್ಕೆ ಪ್ರಕಾಶ್ ಆಚಾರ್ಯ ಮೃತದೇಹವನ್ನು ನೀಡಿದ್ದರು. ಇದನನ್ಬು ನೋಡಿದ ಮೃತರ ಕುಟುಂಬಸ್ಥರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು, ವಿಷಯ ತಿಳಿದು ಸ್ಥಳಕ್ಕಾಗಿಮಿಸಿದ ಜಿಲ್ಲಾಧಿಕಾರಿ ಜಗದೀಶ್ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು. ನಂತರ ಬದಲಾದ ಮೃತದೇಹಗಳನ್ನು ಆಯಾಯ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಇನ್ನೂ ಈ ಸಂಬಂಧ ವರದಿ ನೀಡುವಂತೆ ಆಸ್ಪತ್ರೆ ಸಿಬ್ಬಂದಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.