ರಾಜ್ಯ

ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಪಡೆದ ರಾಜ್ಯ ಕರ್ನಾಟಕ: ಮುಖ್ಯಮಂತ್ರಿ ಯಡಿಯೂರಪ್ಪ

Nagaraja AB

ಬೆಂಗಳೂರು: ಪ್ರಸಕ್ತ ಸಾಲಿನ ಏಪ್ರಿಲ್- ಜೂನ್ ಅವಧಿಯಲ್ಲಿ ಕರ್ನಾಟಕ ದೇಶದ ಇತರ ರಾಜ್ಯಗಳಿಗಿಂತ ಅತಿ ಹೆಚ್ಚು ಅಂದರೆ 10 ಸಾವಿರ ಕೋಟಿ ರೂಪಾಯಿ ವಿದೇಶಿ ನೇರ ಹೂಡಿಕೆ ಗಳಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ನಾನಾ ದೇಶಗಳ ಕಾನ್ಸುಲರ್ ಜನರಲ್ ಜನರಲ್ ಗಳನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಹೂಡಿಕೆಗೆ ಕರ್ನಾಟಕ ಸೂಕ್ತ ಸ್ಥಳ ಹೇಗೆ ಮತ್ತು ಅದಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಮನವರಿಕೆ ಮಾಡಿಕೊಟ್ಟರು.

ಐಟಿ, ಐಟಿಇಎಸ್ ಸೇವೆಗಳು, ಯಂತ್ರೋಪಕರಣಗಳು, ಉತ್ಪಾದನೆ, ಏರೋಸ್ಪೇಸ್ , ಜೈವಿಕ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಹೂಡಿಕೆಗೆ ಇರುವ ಅವಕಾಶಗಳನ್ನು ವಿವರಿಸಿ, ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಅವರು ಮನವಿ ಮಾಡಿದರು.

ಹೂಡಿಕೆದಾರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸುಧಾರಣಾ ನೀತಿ ತರಲಾಗಿದೆ. ಇದರಿಂದಲೇ ರಾಜ್ಯ ಅತಿ ಹೆಚ್ಚು ವಿದೇಶಿ ನೇರ ಹೂಡಿಕೆ ಪಡೆದಿದೆ. ಜೊತೆಗೆ ಜನವರಿಯಿಂದ ಮೇವರೆಗಿನ ಹೂಡಿಕೆ ಪ್ರಸ್ತಾಪಗಳಲ್ಲಿ ಶೇ. 50 ರಷ್ಟನ್ನು ತನ್ನದಾಗಿಸಿಕೊಂಡಿದೆ. ಹೂಡಿಕೆ ಪ್ರಸ್ತಾಪಗಳ ಮೊತ್ತ 1.1 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
 
ಕೈಗಾರಿಕಾ ಕಾರಿಡಾರ್ ಗಳ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಿದೆ. ತುಮಕೂರಿನಲ್ಲಿ 10 ಸಾವಿರ ಎಕರೆ ವಿಸ್ತೀರ್ಣದಲ್ಲಿ ದೇಶದ ಅತಿ ದೊಡ್ಡ ಕೈಗಾರಿಕಾ ಟೌನ್ ಶಿಪ್ ಬರಲಿದೆ. ಬೆಂಗಳೂರು ಮಾತ್ರವಲ್ಲದೇ ಮೈಸೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿಯಂತಹ ಎರಡನೇ ಹಂತದ ನಗರಗಳಲ್ಲಿ ಹೂಡಿಕೆಗೆ ಪೂರಕ ವಾತವಾರಣ ಕಲ್ಪಿಸಲಾಗುವುದು ಎಂದರು.

SCROLL FOR NEXT