ರಾಜ್ಯ

ನಿಯಮ ಮೀರಿ ಸ್ಮಾರಕಗಳನ್ನು ಮುಟ್ಟುತ್ತಿದ್ದ ಪ್ರವಾಸಿಗರು:  ಸಂರಕ್ಷಣೆಗಾಗಿ ಸುತ್ತ ಸರಪಳಿ, ಬ್ಯಾರಿಕೇಡ್ ಅಳವಡಿಕೆ!

Manjula VN

ಹೊಸಪೇಟೆ: ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ ಹಂಪಿಯ ಸಂರಕ್ಷಿತ ಸ್ಮಾರಕದೊಳಗೆ ನಿಯಮಗಳು ಉಲ್ಲಂಘನೆಯಾಗುತ್ತಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸ್ಮಾರಕವನ್ನು ಮುಟ್ಟು, ಅದರ ಮೇಲೆ ಹತ್ತಿ ಫೋಟೋಗಳನ್ನು ತೆಗೆಯುತ್ತಿರುವ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಠಿಣ ನಿಯಮಗಳನ್ನು ಅಧಿಕಾರಿಗಳು ಜಾರಿಗೆ ತಂದಿದ್ದಾರೆ. 

ಹಂಪಿಯ ಕಲ್ಲಿನ ತೇರುಗಳ ಸುತ್ತಲೂ ಸರಪಳಿ, ಬ್ಯಾರಿಕೇಡ್'ಗಳನ್ನು ಹಾಕಲಾಗಿದೆ. ಐತಿಹಾಸಿಕ ಸ್ಮಾರಕದ ಸಂರಕ್ಷಣೆಗೆ ಒತ್ತು ನೀಡಿರುವ ಭಾರತೀಯ ಪುರಾತತ್ವ ಇಲಾಖೆ ಅದರ ಸುತ್ತ ಈಗ ಸರಪಳಿ ಹಾಕಿದ್ದು, ದೇಶ-ವಿದೇಶ ಪ್ರವಾಸಿಗರು ಫೋಟೋ ತೆಗೆಯುವುದಕ್ಕೆ ಕಡಿವಾಣ ಹಾಕಿದೆ. 

ಹಂಪಿಯ ವಿಜಯ ವಿಠ್ಠಲ ದೇಗುಲದ ಸಂಗೀತ ಮಂಟಪದ ಆವರಣ, ಕಮಲ್ ಮಹಲ್ ಸೇರಿ ಕೆಲ ಸ್ಮಾರಕಗಳ ಮೇಲೆ ಹತ್ತದಂತೆ, ಮುಟ್ಟದಂತೆ ನಿಷೇಧಿಸಿ ಸೂಚನಾ ಫಲಕ ಅಳವಡಿಸಲಾಗಿದೆ. ಹೀಗಿದ್ದರೂ ಇತ್ತೀಚೆಗೆ ಹೈದರಾಬಾದ್ ಮೂಲಕ ಭಾವಿ ದಂಪತಿ ಪ್ರೀವೆಡ್ಡಿಂಗ್ ಶೂಟಿಂಗ್ ನಡೆಸಿದ್ದು ಸುದ್ದಿಯಾಗಿತ್ತು. 

ಜೊತೆಗೆ ಪ್ರವಾಸಿಗರೂ ಕಲ್ಲಿನ ತೇರಿನ ಬಳಿ ಹಾಕಿದ್ದ ಬಿಳಿಪಟ್ಟಿ ದಾಟಿ ಎಗ್ಗಿಲ್ಲದೆ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಹೀಗಾಗಿ ಈಗ ಪುರಾತತ್ವ ಇಲಾಖೆ ಸುತ್ತ ಸರಪಳಿ ಬ್ಯಾರಿಕೇಡ್ ಹಾಕಿದೆ. ಸದ್ಯ ಕಲ್ಲಿನ ರಥಕ್ಕೆ ಸರಪಳಿ ಬ್ಯಾರಿಕೇಡ್ ಹಾಕಿದ್ದು, ಮುಂದಿನ ದಿನಗಳಲ್ಲಿ ಉಳಿದ ಸ್ಮಾರಕಗಳಿಗೂ ರಕ್ಷಣಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪುರಾತತ್ವ ಇಲಾಖೆ ತಿಳಿಸಿದೆ. 

ಹಂಪಿ ಸ್ಮಾರಕಗಳ ಬಳಿ ಬರುವ ಸಾಕಷ್ಟು ಪ್ರವಾಸಿಗರು ಸ್ಮಾರಕಗಳ ಬಳಿ ಫೋಟೋ ತೆಗೆಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳಕ್ಕಿಳಿಯುತ್ತಿದ್ದಾರೆ. ಹೀಗಾಗಿ ಭವಿಷ್ಯದ ದಿನಗಳಿಗಾಗಿ ಸ್ಮಾರಕಗಳ ರಕ್ಷಣೆಗೆ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಬ್ಯಾರಿಕೇಡ್ ದಾಟಿ ಮುಂದಕ್ಕೆ ಹೋಗುವ ಜನರಿಗೆ ದಂಡವನ್ನು ವಿಧಿಸಲಾಗುತ್ತದೆ. ಕೇಂದ್ರೀಯ ಪುರಾತತ್ವ ಇಲಾಖೆ ಹೊಸ ನಿಯಮಕ್ಕೆ ಈ ಹಿಂದೆಯೇ ಒಪ್ಪಿಗೆ ನೀಡಿತ್ತು. ಆದರೆ, ಲಾಕ್ಡೌನ್ ಪರಿಣಾಮ ಜಾರಿಗೆ ತರಲು ಸಾಧ್ಯವಾಗಿರಲಿಲ್ಲ. ಇದೀಗ ಜಾರಿಗೆ ತರಲಾಗಿದೆ ಎಂದಿದ್ದಾರೆ. 

ಈ ನಡುವೆ ಪುರಾತತ್ವ ಇಲಾಖೆ ಹೊಸ ನಿಯಮವನ್ನು ಸ್ಥಳೀಯ ಮಾರ್ಗದರ್ಶಕರು ಹಾಗೂ ಛಾಯಾಗ್ರಾಹಕರು ಸ್ವಾಗತಿಸಿದ್ದಾರೆ. 

ಸ್ಮಾರಕಗಳ ಸುತ್ತಲೂ ಬ್ಯಾರಿಕೇಡ್ ಹಾಕುವುದು ಅತ್ಯಂತ ಮುಖ್ಯವಾಗಿತ್ತು. ಮಾರ್ಗದರ್ಶಕರು ಏನೇ ಹೇಳಿದರೂ ಪ್ರವಾಸಿಗರು ಕೇಳುತ್ತಿರಲಿಲ್ಲ. ಇಲಾಖೆಯ ಈ ನಿರ್ಧಾರ ಸ್ಮಾರಕಗಳ ರಕ್ಷಣೆಗೆ ಸಹಾಯಕವಾಗಿದೆ ಎಂದಿದ್ದಾರೆ. 

SCROLL FOR NEXT